ಲಖನೌ: ಪ್ರಗತಿಶೀಲ ಸಮಾಜವಾದಿ ಪಕ್ಷ– ಲೋಹಿಯಾ (ಪಿಎಸ್ಪಿಎಲ್) ಮುಖ್ಯಸ್ಥ ಶಿವಪಾಲ್ ಯಾದವ್ ಅವರು ಯಾದವ ಸಮುದಾಯಕ್ಕಾಗಿ ‘ಯದುಕುಲ ನವೋದಯ ಮಿಷನ್’ ಎಂಬ ಹೊಸ ಸಂಘಟನೆ ರಚಿಸುವುದಾಗಿ ಗುರುವಾರ ಘೋಷಿಸಿದರು.
ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಹೋರಾಟ ನಡೆಸಲಾಗುವುದು. ಯದುಕುಲ ನವೋದಯ ಮಿಷನ್ ಯಾವುದೇ ರಾಜಕೀಯ ಪಕ್ಷ ಪರ ಅಥವಾ ವಿರುದ್ಧ ಅಲ್ಲ ಎಂದು ಯಾದವ್ ಸ್ಪಷ್ಟಪಡಿಸಿದರು.
ಶಿವಪಾಲ್ ಯಾದವ್ ಸಂಘಟನೆ ಪೋಷಕರಾಗಿದ್ದರೆ, ಸಂಭಾಲ್ನ ಮಾಜಿ ಸಂಸದ ಡಿ.ಪಿ. ಯಾದವ್ ಅಧ್ಯಕ್ಷರಾಗಿದ್ದಾರೆ. ಬರಹಗಾರ ವಿಶ್ವಾತ್ಮ ಮಿಷನ್ನ ಸ್ಥಾಪಕ ಸದಸ್ಯರಾಗಿದ್ದಾರೆ.
ಈ ಅಭಿಯಾನವು ಸಮಾಜವಾದಿ ಪಕ್ಷದ ವಿರುದ್ಧದ ಗುರಿಯಾಗಿದೆಯೇ ಎಂಬ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಶಿವಪಾಲ್ ಯಾದವ್ , ‘ಮಿಷನ್ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಥವಾ ಪರವಾಗಿಲ್ಲ ಅಥವಾ ಯಾವುದೇ ರಾಜಕೀಯ ಸಂಘಟನೆಯ ವಿರುದ್ಧವಾಗಿಲ್ಲ. ಸಮುದಾಯದ ಒಗ್ಗಟ್ಟಿಗಾಗಿ ಇದ್ದೇವೆ.ಯಾದವ, ಕುರ್ಮಿ, ಲೋಧಿ ಸೇರಿದಂತೆ ಹಿಂದುಳಿದ ಸಮುದಾಯಗಳ ಸಾಮಾಜಿಕ ಉನ್ನತಿಗಾಗಿ ಮಿಷನ್ ಕೆಲಸ ಮಾಡುತ್ತದೆ’ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಿಂದ ಪ್ರಾರಂಭವಾಗುವ ಈ ಮಿಷನ್ ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳನ್ನು ಒಳಗೊಂಡಿದೆ. ರೈತರು, ಯುವಕರು ಮತ್ತು ಇತರೆ ಹಿಂದುಳಿದ ಸಮುದಾಯಗಳ ಜನರ ಮುಂದೆ ದೊಡ್ಡ ಸವಾಲುಗಳಿವೆ. ಈ ಸಮುದಾಯದ ಜನರಿಗೆ ಶಿಕ್ಷಣ ಮತ್ತು ಒಗ್ಗೂಡಿಸುವ ಗುರಿಯನ್ನು ಮಿಷನ್ ಹೊಂದಿದೆ ಎಂದರು.
‘ನಾವು ನೇತಾಜಿ (ಮುಲಾಯಂ ಸಿಂಗ್ ಯಾದವ್) ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತೇವೆ. ಕಳೆದ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ್ದೇವೆ ಮತ್ತು ಮುಂದಿನ ಚುನಾವಣೆಯಲ್ಲೂ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಶಿವಪಾಲ್ ಯಾದವ್ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.