ADVERTISEMENT

ರಾಷ್ಟ್ರಪತಿ ಚುನಾವಣೆ: ಮುರ್ಮುಗೆ ಬೆಂಬಲ ಘೋಷಿಸಿದ ಶಿವಪಾಲ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 12:20 IST
Last Updated 9 ಜುಲೈ 2022, 12:20 IST
ಶಿವಪಾಲ್‌ ಯಾದವ್‌ ಮತ್ತು ಅಖಿಲೇಶ್‌ ಯಾದವ್‌
ಶಿವಪಾಲ್‌ ಯಾದವ್‌ ಮತ್ತು ಅಖಿಲೇಶ್‌ ಯಾದವ್‌   

ಲಖನೌ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಉತ್ತರ ಪ್ರದೇಶದ ಬಿಜೆಪಿ ಪ್ರತಿಸ್ಪರ್ಧಿ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪ ಶಿವಪಾಲ್‌ ಯಾದವ್‌ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ದ್ರೌಪದಿ ಮುರ್ಮು ಅವರಿಗೆ ಮತ ಚಲಾಯಿಸುವಂತೆ ಕೋರಿದ್ದಾರೆ. ಅವರನ್ನೇ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದೇನೆ ಎಂದು ಶಿವಪಾಲ್‌ ತಿಳಿಸಿದ್ದಾರೆ.

ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ)ವನ್ನು ಕಟ್ಟಿಕೊಂಡಿರುವ ಎಸ್‌ಪಿ ಶಾಸಕ ಶಿವಪಾಲ್‌ ಯಾದವ್‌ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಫಲಿತಾಂಶದ ಬಳಿಕ ಇಬ್ಬರ ನಡುವೆ ಒಡಕು ಮೂಡಿದೆ.

ADVERTISEMENT

ಮುರ್ಮು ಅವರ ಗೌರವಾರ್ಥ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಏರ್ಪಡಿಸಿದ್ದ ಔತಣ ಕೂಟದಲ್ಲಿ ಎಸ್‌ಪಿ ಮೈತ್ರಿ ಪಕ್ಷ ಸುಹೇಲ್‌ದೇವ್‌ ಭಾರತೀಯ ಸಮಾಜ್‌ ಪಾರ್ಟಿ ಮುಖ್ಯಸ್ಥ ಓಂ ಪ್ರಕಾಶ್‌ ರಾಜ್‌ಭಾರ್‌ ಮತ್ತು ಶಿವಪಾಲ್‌ ಯಾದವ್ ಅವರು ಪಾಲ್ಗೊಂಡಿದ್ದರು. ಇದರಿಂದಾಗಿ ಯಶವಂತ ಸಿನ್ಹಾ ಅವರನ್ನು ಬೆಂಬಲಿಸುತ್ತಿರುವ ವಿರೋಧಪಕ್ಷಗಳ ಪಾಳಯದಲ್ಲಿ ಬಿರುಕು ಮೂಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.