ಹೈದರಾಬಾದ್: ರೈಲು ಹಳಿಯ ಅಡಿಯಲ್ಲಿ ಸಿಲುಕಿಕೊಂಡ ಶೂನಿಂದ ಬಿಡಿಸಿಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಯ ಮೇಲೆ ಗೂಡ್ಸ್ ರೈಲು ಹರಿದು ಆತ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಗರಿವಿಡಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಎಸ್ಎಸ್ಎಲ್ಸಿ ಮುಗಿಸಿ ಖಾಸಗಿ ಕಾಲೇಜೊಂದಕ್ಕೆ ಸೇರಿ ಡಿಪ್ಲೊಮೊ ಕೋರ್ಸ್ ತೆಗೆದುಕೊಂಡಿದ್ದ ಶ್ರೀಕಾಕುಲಂ ಜಿಲ್ಲೆಯ ಕೊಂಡಂಪೇಟೆಯ ಸುರೇಶ್ (17), ತರಗತಿಗೆ ಹೋಗುವ ಧಾವಂತದಲ್ಲಿ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಜುಲೈ 2ರಂದು ಕಾಲೇಜು ಸೇರಿದ್ದ ಸುರೇಶ್, ಮೂರು ದಿನ ತರಗತಿಗೆ ಹಾಜರಾಗಿದ್ದರು. ರಾಜಂ ಎಂಬಲ್ಲಿನ ತಮ್ಮ ಸಂಬಂಧಿಕರ ಮನೆಯಿಂದ ಬಸ್ನಲ್ಲಿ ಬಂದಿದ್ದ ಸುರೇಶ್, ಬದ್ರಿಪ್ರಸಾದ್ ಕಾಲೊನಿಯಲ್ಲಿ ಇಳಿದಿದ್ದಾರೆ. ತರಗತಿಗೆ ತಡವಾಗುತ್ತದೆ ಎಂಬ ಕಾರಣಕ್ಕೆ ರೈಲು ಹಳಿ ದಾಟಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಶೂ ಹಳಿಯ ಕೆಳಗೆ ಸಿಲುಕೊಂಡಿದೆ. ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರಾದರೂ, ಅಷ್ಟರಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು ಸುರೇಶ್ ಮೇಲೆ ಹರಿದಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
‘ಕಾಲೇಜಿಗೆ ಸೇರಿದ ಕಾರಣಕ್ಕೆ ಹೊಸ ಶೂ ಕೊಡಿಸಿದ್ದೆ. ಅದೇ ಶೂ ಅವನ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ಗೊತ್ತಿರಲಿಲ್ಲ’ ಎಂದು ವಿದ್ಯಾರ್ಥಿಯ ತಂದೆ ಬ್ರಹ್ಮಮ್ ದುಃಖ ತೋಡಿಕೊಂಡಿದ್ದಾರೆ. ಬ್ರಹ್ಮಮ್ ಮತ್ತು ಲಕ್ಷ್ಮೀ ದಂಪತಿಗೆ ಇದ್ದ ಇಬ್ಬರು ಮಕ್ಕಳಲ್ಲಿ ಸುರೇಶ್ ಅಕಾಲಿಕ ಸಾವು ಕುಟುಂಬದಲ್ಲಿ ದುಃಖದಲ್ಲಿ ಮುಳುಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.