ನವದೆಹಲಿ: ನೂತನ ಶಾಸಕರ ಪ್ರಮಾಣವಚನ ಬೋಧಿಸುವುದಕ್ಕಾಗಿ ಹಂಗಾಮಿ ಸ್ಪೀಕರಾಗಿ ಅಕ್ಬರುದ್ದೀನ್ ಒವೈಸಿ ಕಾರ್ಯ ನಿರ್ವಹಿಸಿದ್ದ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಬಿಜೆಪಿ ಶಾಸಕರ ನಡೆಗೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ತೆಲಂಗಾಣದ ಹಂಗಾಮಿ ಸ್ಪೀಕರ್ ಅಕ್ಬರುದ್ದೀನ್ ಒವೈಸಿ ಅವರ ನೇತೃತ್ವದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಬಿಜೆಪಿಯ 8 ಶಾಸಕರು ಬಹಿಷ್ಕರಿಸಿದ್ದಾರೆ. ಜನರ ಇಂಥ ದ್ವೇಷವು, ನನ್ನ ದೇಶ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಅಚ್ಚರಿ ಮೂಡಿಸಿದೆ’ ಎಂದು ಅವರು ‘ಎಕ್ಸ್’ ವೇದಿಕೆಯಲ್ಲಿ ಟೀಕಿಸಿದ್ದಾರೆ.
ತೆಲಂಗಾಣ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಪ್ರಮಾಣವಚನ ಬೋಧಿಸುವ ಕಾರ್ಯಕ್ರಮದೊಂದಿಗೆ ವಿಧಾನಸಭೆಯ ಮೊದಲ ಅಧಿವೇಶನ ಶನಿವಾರ ಆರಂಭವಾಯಿತು. ಆದರೆ, ನಿಯಮಗಳನ್ನು ಉಲ್ಲಂಘಿಸಿ, ಎಐಎಂಐಎಂ ಶಾಸಕ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕರು, ಕಲಾಪದಿಂದ ದೂರ ಉಳಿದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.