ಚಂಡಿಗಡ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಸಚಿವ ಸಂಪುಟ ಸ್ಥಾನಕ್ಕೆಸಿಧು ನೀಡಿದ್ದ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಅಂಗೀಕರಿಸಲುರಾಜ್ಯಪಾಲ ವಿ.ಪಿ ಸಿಂಗ್ ಬದನೂರ್ ಅವರಿಗೆ ಸಿಎಂ ಕಳುಹಿಸಿಕೊಟ್ಟಿದ್ದಾರೆ ಎಂದುವಕ್ತಾರರೊಬ್ಬರು ತಿಳಿಸಿದರು. ಬುಧವಾರ ದೆಹಲಿಯಿಂದ ವಾಪಾಸಾಗಿದ್ದ ಅಮರಿಂದರ್ ಸಿಂಗ್, ಶನಿವಾರ ಬೆಳಗ್ಗೆ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದಾರೆ. ಪತ್ರ ಕೇವಲ ಒಂದು ವಾಕ್ಯದಲ್ಲಷ್ಟೇ ಇತ್ತು. ರಾಜೀನಾಮೆಗೆ ಕಾರಣವಾಗಲಿ ಅಥವಾ ವಿವರಣೆಯಾಗಲಿ ಇರಲಿಲ್ಲ’ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಸಿಧು ನಡುವಿನಭಿನ್ನಮತ ಶಮನಕ್ಕೆ ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿದೆ ಎನ್ನುವ ಸಂದರ್ಭದಲ್ಲೇ ಅಮರಿಂದರ್ ಸಿಂಗ್ ರಾಜೀನಾಮೆ ಅಂಗೀಕರಿಸಿದ್ದಾರೆ.ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆ ಹೊಂದಿದ್ದ ಸಿಧು ಅವರಿಗೆ,ಭಿನ್ನಮತ ತೀವ್ರಗೊಂಡ ಬಳಿಕ ಖಾತೆ ಬದಲಾಯಿಸಲಾಗಿತ್ತು. ಜೂನ್ 6ರಂದು ಅವರಿಗೆಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿತ್ತು. ಸಿಧು ಜತೆಗೆ ಇತರೆ ಸಚಿವರ ಖಾತೆಗಳನ್ನೂ ಬದಲಾಯಿಸಲಾಗಿತ್ತು.
ಹೊಸ ಖಾತೆ ನೀಡಿ ತಿಂಗಳುಗಳೇ ಕಳೆದಿದ್ದರು, ಸಿಧು ಅಧಿಕಾರ ವಹಿಸಿಕೊಂಡಿರಲಿಲ್ಲ. ಇದರಿಂದ ಅಮರಿಂದರ್ ಆಡಳಿತದ ಬಗ್ಗೆ ವಿಪಕ್ಷಗಳು ಟೀಕಿಸಿದ್ದವು. ಜುಲೈ 14ರಂದು ಟ್ವಿಟರ್ ಮೂಲಕ ತನ್ನ ರಾಜೀನಾಮೆ ಕುರಿತು ಮಾಹಿತಿ ನೀಡಿದ್ದ ಸಿಧು, ಜೂನ್ 10ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕಳುಹಿಸಿದ್ದ ರಾಜೀನಾಮೆ ಪತ್ರವನ್ನು ಪ್ರಕಟಿಸಿದ್ದರು. ಜುಲೈ 15ರಂದು ಅಮರಿಂದರ್ ಸಿಂಗ್ ದೆಹಲಿಯಲ್ಲಿರುವ ಸಂದರ್ಭದಲ್ಲಿ ರಾಜೀನಾಮೆ ಪತ್ರವನ್ನು ಅಧಿಕೃತ ನಿವಾಸಕ್ಕೂ ಸಿಧು ಕಳುಹಿಸಿದ್ದರು.
ನಾನೇನೂ ಮಾಡಲು ಸಾಧ್ಯವಿಲ್ಲ!: ರಾಜೀನಾಮೆ ಕುರಿತು ವಾರದ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಅಮರಿಂದರ್, ‘ಇಲಾಖೆಯ ಜವಾಬ್ದಾರಿ ಹೊತ್ತುಕೊಳ್ಳಲು ಸಿಧು ಅವರಿಗೆ ಇಷ್ಟವಿಲ್ಲದೇ ಇದ್ದಲ್ಲಿ ನಾನೇನೂ ಮಾಡಲು ಸಾಧ್ಯವಿಲ್ಲ’ ಎಂದಿದ್ದರು. ಇಂಧನ ಇಲಾಖೆಗೆ ಸಚಿವರ ಅನುಪಸ್ಥಿತಿಯಲ್ಲಿ ಸ್ವತಃ ಅಮರಿಂದರ್ ಇಲಾಖೆಯ ಜವಾಬ್ದಾರಿ ಹೊತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.