ಚಂಡೀಗಡ: ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಇಂದು ಪಟಿಯಾಲದ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ. 1988ರಲ್ಲಿ 65 ವರ್ಷ ವಯಸ್ಸಿನ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಸಿಧು ಅವರಿಗೆ ಒಂದು ವರ್ಷ ಕಠಿಣ ಸಜೆ ವಿಧಿಸಿತ್ತು.
ಬೆಳಗ್ಗೆ 10 ಗಂಟೆ ಸುಮಾರಿಗೆ ಸಿಧು ನ್ಯಾಯಾಲಯಕ್ಕೆ ಬರಲಿದ್ದಾರೆ ಎಂದು ಪಟಿಯಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾರಿಂದರ್ ಪಾಲ್ ಹೇಳಿದ್ದಾರೆ.
ಗುರುವಾರ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಶಿಕ್ಷೆ ವಿಧಿಸಿದ ಬಳಿಕ ಅವರ ಪತ್ನಿ ನವಜೋತ್ ಕೌರ್ ಸಿಧು ಸಹ ರಾತ್ರಿ 9.45ರ ಸುಮಾರಿಗೆ ಅಮೃತಸರಕ್ಕೆ ಆಗಮಿಸಿದ್ದಾರೆ.
‘ಅಪರಾಧಿಗೆ ಶಿಕ್ಷೆ ವಿಧಿಸುವಾಗ ತೋರುವ ಯಾವುದೇ ಅನುಚಿತ ಸಹಾನುಭೂತಿಯು ನ್ಯಾಯ ವ್ಯವಸ್ಥೆಗೆ ಹೆಚ್ಚು ಹಾನಿ ಮಾಡುತ್ತದೆ ಮತ್ತು ಕಾನೂನಿನ ಪರಿಣಾಮಕತ್ವದ ಬಗ್ಗೆ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ’ ಎಂದುಗುರುವಾರ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.
65 ವರ್ಷದ ವ್ಯಕ್ತಿಗೆ ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ ಅಪರಾಧಕ್ಕಾಗಿ ಸಿಧು ಅವರನ್ನು ಮೇ 2018ರಲ್ಲಿ ತಪ್ಪಿತಸ್ಥರೆಂದು ಕೋರ್ಟ್ ಪರಿಗಣಿಸಿದ್ದರೂ ಸಹ ಅವರಿಗೆ ಜೈಲು ಶಿಕ್ಷೆ ನೀಡದೆ ಕೇವಲ ₹ 1,000 ದಂಡ ವಿಧಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.