ADVERTISEMENT

ಪುನಶ್ಚೇತನಕ್ಕೆ ಕೊನೇ ಅವಕಾಶ :ಸೋನಿಯಾಗೆ ಸಿಧು ಪತ್ರ:

ಸೋನಿಯಾಗೆ ಸಿಧು ಪತ್ರ: ಭೇಟಿಗೆ ಅವಕಾಶ ಕೋರಿಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 18:38 IST
Last Updated 17 ಅಕ್ಟೋಬರ್ 2021, 18:38 IST
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು   

ಚಂಡಿಗಡ (ಪಿಟಿಐ):ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರ ಈಡೇರಿಸಬೇಕಾದ ಜನರ ಆಶೋತ್ತರಗಳನ್ನು ಅದು ಒಳಗೊಂಡಿದೆ.

2022ರ ಪಂಜಾಬ್ ವಿಧಾನಸಭಾ ಚುನಾವಣಾ ಪ್ರಣಾಳಿಕೆಗೂ ಮುನ್ನ, ತಮ್ಮ 13 ಅಂಶಗಳ ಕಾರ್ಯಸೂಚಿಯನ್ನು ಅವರು ಪ್ರಕಟಿಸಿದ್ದಾರೆ. ಈ ಬಗ್ಗೆ ಚರ್ಚಿಸುವುದಕ್ಕಾಗಿ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಕೋರಿದ್ದಾರೆ.

ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾದ ಮರುದಿನ ಬರೆದಿರುವ ಪತ್ರದಲ್ಲಿ,‘ಇದು, ಪಂಜಾಬಿನಲ್ಲಿ ಪಕ್ಷದ ಪುನರುಜ್ಜೀವನಕ್ಕೆ ಇರುವ ಕೊನೆಯ ಅವಕಾಶ’ ಎಂದು ಸಿಧು ಉಲ್ಲೇಖಿಸಿದ್ದಾರೆ.

ADVERTISEMENT

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಧು, ತಮ್ಮ ಆತಂಕಗಳನ್ನು ಪರಿಹರಿಸಲಾಗಿದೆ ಎಂದುಅಕ್ಟೋಬರ್ 15ರಂದು ಹೇಳಿದ್ದರು. ಸಿಧು ರಾಜ್ಯ ಘಟಕದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷ ಹೇಳಿತ್ತು. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಈ ನಿರ್ಧಾರಕ್ಕೆ ಬರಲಾಗಿತ್ತು.

2017ರ ಚುನಾವಣಾ ಪ್ರಚಾರದ ವೇಳೆ ತಯಾರಿಸಿದ್ದ 18 ಅಂಶಗಳ ಕಾರ್ಯಸೂಚಿಯ ಅಂಶಗಳು ಹಾಗೂ ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ರಾಜ್ಯ ಸರ್ಕಾರವು ಆದ್ಯತೆಯ ಮೇರೆಗೆ ಈಡೇರಿಸಬೇಕು ಎಂದು ಸಿಧು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

2015ರಲ್ಲಿ ಫರೀದ್‌ಕೋಟ್‌ನ ಕೋಟ್ಕಾಪುರ ಮತ್ತು ಬೆಹ್ಬಾಲ್ ಕಲಾನ್‌ನಲ್ಲಿ ನಡೆದ ಪೋಲೀಸ್ ಗುಂಡಿನ ದಾಳಿ ವಿಚಾರವಾಗಿ, ಪಂಜಾಬ್ ಜನರು ನ್ಯಾಯ ಬಯಸುತ್ತಿದ್ದಾರೆ ಎಂದು ಸಿಧು ಹೇಳಿದ್ದಾರೆ.

‘13 ಅಂಶಗಳ ಕಾರ್ಯಸೂಚಿಯು ಪಕ್ಷದ ಪ್ರಣಾಳಿಕೆಗಿಂತ ಭಿನ್ನವಾಗಿದ್ದು, ದೀರ್ಘಾವಧಿಯಲ್ಲಿ ಕಾರ್ಯಗತಗೊಳಿಸಬೇಕಾದ ಅಂಶಗಳನ್ನು ಒಳಗೊಂಡಿದೆ. ಇದು ಶಿಕ್ಷಣ ತಜ್ಞರು, ನಾಗರಿಕ ಸಮಾಜ, ಪಕ್ಷದ ಕಾರ್ಯಕರ್ತರೊಂದಿಗೆ ಹಲವು ವರ್ಷಗಳ ಸಮಾಲೋಚನೆ ಮತ್ತು ಪ್ರತಿಕ್ರಿಯೆಯ ಬಳಿಕ ರೂಪಿಸಲಾಗಿದೆ’ ಎಂದು ಸಿಧು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.