ADVERTISEMENT

ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ

ಸಿಖ್‌ ವಿರೋಧಿ ಗಲಭೆ

ಪಿಟಿಐ
Published 29 ಮಾರ್ಚ್ 2019, 17:20 IST
Last Updated 29 ಮಾರ್ಚ್ 2019, 17:20 IST
Supreme-Court_cutout
Supreme-Court_cutout   

ನವದೆಹಲಿ: 1984ರ ಸಿಖ್‌ ವಿರೋಧಿ ಗಲಭೆಗೆ ಸಂಬಂಧಿಸಿದಂತೆ 186 ಪ್ರಕರಣಗಳ ತನಿಖೆ ಪೂರ್ಣಗೊಳಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸುಪ್ರೀಂ ಕೋರ್ಟ್‌ ಶುಕ್ರವಾರ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.

’ಪ್ರಕರಣಗಳ ತನಿಖೆ ಶೇ 50ಕ್ಕಿಂತಲೂ ಹೆಚ್ಚು ಪ್ರಗತಿಯಾಗಿದ್ದು, ಪೂರ್ಣಗೊಳಿಸಲು ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕು’ ಎಂದು ಎಸ್‌ಐಟಿ ನ್ಯಾಯಪೀಠವನ್ನು ಕೋರಿತ್ತು. ಇದನ್ನು ಆಲಿಸಿದ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಮತ್ತು ಎಸ್‌. ಅಬ್ದುಲ್‌ ನಜೀರ್‌ ಅವರನ್ನೊಳಗೊಂಡ ನ್ಯಾಯಪೀಠವು ಹೆಚ್ಚುವರಿ ಕಾಲಾವಕಾಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 62 ಮಂದಿ ಪೊಲೀಸರ ಪಾತ್ರದ ಕುರಿತು ತನಿಖೆ ನಡೆಸಬೇಕೆಂದು ದೆಹಲಿ ಸಿಖ್ ಗುರುದ್ವಾರ ಆಡಳಿತ ಸಮಿತಿಯ ಸದಸ್ಯ ಎಸ್‌. ಗುರ್ಲಾದ್‌ ಸಿಂಗ್‌ ಕಹ್ಲೋನ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ ನೀಡಿದೆ.

ADVERTISEMENT

ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌.ಎನ್‌. ಧಿಂಗ್ರಾ ನೇತೃತ್ವದಲ್ಲಿ ನಿವೃತ್ತ (ಐಪಿಎಸ್) ಅಧಿಕಾರಿ ರಾಜ್‌ದೀಪ್‌ ಸಿಂಗ್‌ ಮತ್ತು ಐಪಿಎಸ್‌ ಅಧಿಕಾರಿ ಅಭಿಷೇಕ್‌ ದುಲಾರ್‌ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ಸುಪ್ರೀಂ ಕೋರ್ಟ್‌ 2018ರ ಜನವರಿ 11ರಂದು ರಚಿಸಿತ್ತು.

ಬಳಿಕ ರಾಜ್‌ದೀಪ್‌ ಸಿಂಗ್‌ ಅವರು ವೈಯಕ್ತಿಕ ಕಾರಣ ನೀಡಿ ಎಸ್‌ಐಟಿಯಿಂದ ಹೊರ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.