ಬಾಲಸೋರ್ (ಒಡಿಶಾ): ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ‘ಸೂಪರ್ಸಾನಿಕ್ ಮಿಸೈಲ್ ಅಸಿಸ್ಟೆಡ್ ರಿಲೀಸ್ ಆಫ್ ಟೊರ್ಪಿಡೊ (ಸ್ಮಾರ್ಟ್)’ಪರೀಕ್ಷೆಯು ಯಶಸ್ವಿಯಾಗಿ ಒಡಿಶಾದ ಕರಾವಳಿಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ನಡೆಯಿತು.
‘ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಇರುವ ಉಡಾವಣಾ ಪರೀಕ್ಷಾ ಕೇಂದ್ರದಿಂದ 11.45ರ ವೇಳೆಗೆ ಇದನ್ನು ಉಡಾವಣೆ ಮಾಡಲಾಯಿತು. ಗುರಿಯನ್ನು ನಿಖರವಾಗಿ ಈ ಕ್ಷಿಪಣಿ ಹಾಗೂ ಟೊರ್ಪಿಡೊ ತಲುಪಿದೆ’ ಎಂದು ಮೂಲಗಳು ತಿಳಿಸಿವೆ.
‘ದೇಶದ ಜಲಾಂತರ್ಗಾಮಿ ನೌಕೆಗಳಲ್ಲಿ ಇರುವ ಟೊರ್ಪಿಡೊಗಳ ವ್ಯಾಪ್ತಿಗಿಂತ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳು ದೂರ ಇದ್ದ ಸಂದರ್ಭದಲ್ಲಿ, ಇವುಗಳನ್ನು ನಾಶಪಡಿಸಲು,‘ಸ್ಮಾರ್ಟ್’ ಮುಖಾಂತರ ಟೊರ್ಪಿಡೊಗಳನ್ನು ಉಡಾವಣೆಗೊಳಿಸಲಾಗುತ್ತದೆ. ಸ್ಮಾರ್ಟ್ ಯಶಸ್ವಿ ಪರೀಕ್ಷೆಯುಜಲಾಂತರ್ಗಾಮಿಗಳ ಯುದ್ಧದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದೆ’ ಎಂದು ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
‘ಯುದ್ಧ ಹಡಗುಗಳು ಅಥವಾ ಟ್ರಕ್ ಮೇಲಿರುವ ಉಡಾವಣಾ ಘಟಕದಿಂದ‘ಸ್ಮಾರ್ಟ್’ ಉಡಾವಣೆಗೊಳಿಸಬಹುದು. ಕ್ಷಿಪಣಿಯು, ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಯ ಹತ್ತಿರಕ್ಕೆ ತಲುಪಿದ ಕೂಡಲೇ, ಟೊರ್ಪಿಡೊವನ್ನು ಅದು ನೀರಿಗೆ ದೂಡುತ್ತದೆ. ಈ ಟೊರ್ಪಿಡೊ ಜಲಾಂತರ್ಗಾಮಿಯನ್ನು ನಾಶಪಡಿಸುತ್ತದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಈ ಯಶಸ್ಸಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.