ಬಾರಾಬಂಕಿ: ಶಾಸಕ, ಸಂಸದರು ಸರ್ಕಾರಿ ಅಧಿಕಾರಿಗಳಿಗೆ 'ಸರ್' ಎಂದು ಸಂಬೋಧಿಸಿ ಗೌರವ ತೋರಿಸುವವರನ್ನು ಬಿಜೆಪಿ ಸಂಸದ ಬೃಜಭೂಷಣ್ ಶರಣ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಗೊಂಡ ಮೇಲೂ ಕೆಲವರು ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಕೈಸರ್ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬೃಜಭೂಷಣ್, ಕೆಲವು ನಾಯಕರು ಅಧಿಕಾರಿಗಳ ಕಾಲಿಗೂ ಬೀಳುತ್ತಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮಾಜಿ ಸಚಿವ ಅರವಿಂದ್ ಸಿಂಗ್ 'ಗೊಪೆ' ಅವರ ಸಹೋದರ ಅಶೋಕ್ ಸಿಂಗ್ ಅವರ ಸಾವಿಗೆ ಸಂತಾಪ ಸೂಚಿಸಲು ಬಾರಬಂಕಿಗೆ ಬಂದಿದ್ದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.
ಮೊದಲೆಲ್ಲ ನಾಯಕರೆಂದರೆ ಚಳುವಳಿ ಮೂಲಕ ಅಥವಾ ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಹೋರಾಟ ನಡೆಸಿದವರಾಗಿರುತ್ತಿದ್ದರು. ಆದರೆ ಈಗ ಅಂತಹದ್ದೆಲ್ಲವೂ ನಿಂತಿದೆ. ಅಂತಹ ನಾಯಕರ ಸಂಖ್ಯೆ ಕ್ಷೀಣಿಸಿದೆ. ಈಗ ಪದನಿಮಿತ್ತ ನಾಯಕರು ಮೇಲೆ ಬರುತ್ತಿದ್ದಾರೆ ಎಂದು ಬೃಜಭೂಷಣ್ ಹೇಳಿದ್ದಾರೆ.
ಇಂತಹ ಪದನಿಮಿತ್ತ ನಾಯಕರು ಶಾಸಕರಾಗಿ ಆಯ್ಕಗೊಳ್ಳುತ್ತಾರೆ, ಆದರೆ ಅವರಿಗೆ ಧೈರ್ಯ ಇರುವುದಿಲ್ಲ. ಅವರು ಸಂಸದರೂ ಆಗುತ್ತಾರೆ, ಆದರೆ ಅಧಿಕಾರಿಗಳನ್ನು 'ಸರ್' ಸಂಬೋಧಿಸುವ ತಮ್ಮ ಹಳೆಯ ಚಾಳಿಯನ್ನು ಬಿಡುವುದಿಲ್ಲ. ಈ ದಿನಗಳಲ್ಲಿ ಸಂಸದರು ಮತ್ತು ಶಾಸಕರು ಅಧಿಕಾರಿಗಳ ಕಾಲಿಗೂ ಬೀಳುತ್ತಿದ್ದಾರೆ ಎಂದು ಬೃಜಭೂಷಣ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.