ADVERTISEMENT

ಅಸ್ವಸ್ಥ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಹಾ ಕುಂಭಕ್ಕೆ ತೆರಳಿದ ಮಗ

ಪಿಟಿಐ
Published 20 ಫೆಬ್ರುವರಿ 2025, 15:08 IST
Last Updated 20 ಫೆಬ್ರುವರಿ 2025, 15:08 IST
   

ರಾಮಗಢ(ಜಾರ್ಖಂಡ್): ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿರುವ ಒಬ್ಬ ವ್ಯಕ್ತಿ, ಪುಣ್ಯ ಸ್ನಾನಕ್ಕಾಗಿ ಪತ್ನಿ, ಮಕ್ಕಳು ಹಾಗೂ ಅತ್ತೆ–ಮಾವನ ಜೊತೆ ಮಹಾ ಕುಂಭಕ್ಕೆ ತೆರಳಿರುವ ಘಟನೆ ನಡೆದಿದೆ.

‘ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ (ಸಿಸಿಎಲ್‌) ನೌಕರ ಅಖಿಲೇಶಕುಮಾರ್‌, ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಪ್ರಯಾಗರಾಜ್‌ಗೆ ತೆರಳಿದ್ದಾನೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಾಮಗಢ ಪೊಲೀಸ್‌ ಠಾಣೆ ವ್ಯಾಪ್ತಿಯ ಸುಭಾಷ್‌ನಗರ ಕಾಲೊನಿಯಲ್ಲಿರುವ ಸಿಸಿಎಲ್‌ನ ಕ್ವಾರ್ಟರ್ಸ್‌ವೊಂದರಿಂದ, ಅಖಿಲೇಶಕುಮಾರ್‌ ತಾಯಿ, 65 ವರ್ಷದ ಸಂಜುದೇವಿ ಅವರನ್ನು ಬುಧವಾರ ರಕ್ಷಿಸಲಾಗಿದೆ ಎಂದು ರಾಮಗಢ ಪೊಲೀಸ್‌ ಅಧಿಕಾರಿ ಪರಮೇಶ್ವರ ಪ್ರಸಾದ್‌ ತಿಳಿಸಿದ್ಧಾರೆ.

ADVERTISEMENT

‘ತಾಯಿಯನ್ನು ಮನೆಯಲ್ಲಿ ಸೋಮವಾರದಿಂದ ಕೂಡಿ ಹಾಕಿರುವ ಕುರಿತು ಮಗಳು ಚಾಂದಿನಿದೇವಿ ನೀಡಿದ ಮಾಹಿತಿ ಆಧರಿಸಿ, ಸಂಜು ದೇವಿ ಅವರನ್ನು ರಕ್ಷಿಸಲಾಗಿದೆ’ ಎಂದು ಪರಮೇಶ್ವರ ಪ್ರಸಾದ್‌ ತಿಳಿಸಿದ್ಧಾರೆ.

ಚಾಂದಿನಿದೇವಿ ಅವರು ಸಿಸಿಎಲ್‌ ವಸತಿಗೃಹಗಳಿಂದ ಐದು ಕಿ.ಮೀ. ದೂರದಲ್ಲಿರುವ ಊರಿನಲ್ಲಿ ವಾಸಿಸುತ್ತಿದ್ದಾರೆ. ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ, ಎಲ್ಲರೂ ಪ್ರಯಾಗರಾಜ್‌ಗೆ ತೆರಳಿದ್ದರ ಕುರಿತು ನೆರೆಹೊರೆಯವರು ಅವರಿಗೆ ಮಾಹಿತಿ ನೀಡಿದ್ದರು. 

‘ಮನೆ ಬೀಗ ಒಡೆದು ರಕ್ಷಿಸಿದ ಕೂಡಲೇ, ತಾಯಿಗೆ ನೆರೆಹೊರೆಯವರು ಊಟ ನೀಡಿದರು. ನಂತರ ಅವರನ್ನು ಸಿಸಿಎಲ್‌ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಚಾಂದಿನಿದೇವಿ, ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಸಹೋದರ ಅಖಿಲೇಶಕುಮಾರ್‌ಗೆ ಅನುಕಂಪದ ಆಧಾರದ ಮೇಲೆ ಸಿಸಿಎಲ್‌ನಲ್ಲಿ ನೌಕರಿ ದೊರತಿದೆ’ ಎಂದೂ ಚಾಂದಿನಿ ದೇವಿ ತಿಳಿಸಿದ್ದಾರೆ.

‘ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಆಹಾರ, ಕುಡಿಯುವ ನೀರು, ಔಷಧ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಯೇ ಪ್ರಯಾಗರಾಜ್‌ಗೆ ತೆರಳಿದ್ದೇವೆ ಎಂದು ಅಖಿಲೇಶಕುಮಾರ್‌ ತಿಳಿಸಿದ್ದಾರೆ’ ಎಂದು ಮತ್ತೊಬ್ಬ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.