ADVERTISEMENT

ಬಿಹಾರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ, ಮಹಾಮೈತ್ರಿಗೆ ಮತ ನೀಡಲು ಮನವಿ

ಏಜೆನ್ಸೀಸ್
Published 27 ಅಕ್ಟೋಬರ್ 2020, 7:09 IST
Last Updated 27 ಅಕ್ಟೋಬರ್ 2020, 7:09 IST
ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ   

ನವದೆಹಲಿ: ಅಧಿಕಾರ ಮತ್ತು ಅದರ ಅಹಂಕಾರದಿಂದಾಗಿ ಬಿಹಾರ ಸರ್ಕಾರವು ತನ್ನ ಮಾರ್ಗದಿಂದ ವಿಮುಖವಾಗಿದೆ. ಸಾರ್ವಜನಿಕರು ಕಾಂಗ್ರೆಸ್‌ನ ಮಹಾಘಟಬಂಧನದ (ಮಹಾಮೈತ್ರಿ) ಜೊತೆಗಿದ್ದಾರೆ ಎಂದು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.

'ಪ್ರಸ್ತುತ ಬಿಹಾರ ಸರ್ಕಾರ ತನ್ನ ಮಾರ್ಗದಿಂದ ವಿಮುಖವಾಗಿದೆ. ಅವರು ಮಾತನಾಡುವುದು ಅಥವಾ ಮಾಡುವುದು ಯಾವುದು ಒಳ್ಳೆಯದಲ್ಲ. ಕಾರ್ಮಿಕರು ಅಸಹಾಯಕರಾಗಿದ್ದಾರೆ, ರೈತರು ಆತಂಕಕ್ಕೊಳಗಾಗಿದ್ದಾರೆ ಮತ್ತು ಯುವಕರು ನಿರಾಸೆಗೊಂಡಿದ್ದಾರೆ. ಜನರು ಮಹಾಘಟಬಂದನದೊಂದಿಗಿದ್ದಾರೆ' ಎಂದಿದ್ದಾರೆ.

ರಾಜ್ಯದ ಆರ್ಥಿಕತೆಯ ದುರ್ಬಲ ಸ್ಥಿತಿಯಿಂದಾಗಿ ಜನರ ಜೀವನವು ಕಷ್ಟದಲ್ಲಿ ಸಿಲುಕಿದೆ. ಮಣ್ಣಿನ ಮಕ್ಕಳು ಇಂದು ತೀವ್ರ ತೊಂದರೆಯಲ್ಲಿದ್ದಾರೆ. ದಲಿತರು ಕೆಟ್ಟ ಸ್ಥಿತಿಯಲ್ಲಿದ್ದಾರೆ. ಸಮಾಜದ ಹಿಂದುಳಿದ ವರ್ಗಗಳೂ ಕೂಡ ಈ ಅವಸ್ಥೆಗೆ ಬಲಿಯಾಗುತ್ತಿವೆ ಎಂದು ಹೇಳಿದ್ದಾರೆ.

ADVERTISEMENT

ಈಗ ಬದಲಾವಣೆ ಗಾಳಿಯಲ್ಲಿದೆ. ಏಕೆಂದರೆ ಬದಲಾವಣೆ ಎಂದರೆ ಉತ್ಸಾಹ, ಶಕ್ತಿ, ಹೊಸ ಆಲೋಚನೆ ಮತ್ತು ಅಧಿಕಾರ. ಈಗ ಹೊಸದನ್ನು ಬರೆಯುವ ಸಮಯ ಬಂದಿದೆ. ಬಿಹಾರದ ಜನರ ಕೈಗಳುಕೌಶಲ್ಯ, ಶಕ್ತಿ, ನಿರ್ಮಾಣದ ಶಕ್ತಿಯ ಗುಣಗಳನ್ನು ಹೊಂದಿದೆ. ಆದರೆ ನಿರುದ್ಯೋಗ, ವಲಸೆ, ಹಣದುಬ್ಬರ, ಹಸಿವಿನಿಂದಾಗಿ ಕಣ್ಣೀರು ಮತ್ತು ಅವರ ಕಾಲುಗಳಲ್ಲಿ ಗುಳ್ಳೆಗಳು ಎದ್ದಿವೆ ಎಂದು ದೂರಿದ್ದಾರೆ.

ಪದಗಳಲ್ಲಿ ಹೇಳಲಾಗದ ಭಾವವನ್ನು ಈಗ ಕಣ್ಣೀರಿನ ಮೂಲಕ ಹೇಳಬೇಕಾಗಿದೆ. ಭಯ ಮತ್ತು ಅಪರಾಧಗಳ ಆಧಾರದ ಮೇಲೆ ನೀತಿ ಮತ್ತು ಸರ್ಕಾರಗಳನ್ನು ರಚಿಸಲಾಗುವುದಿಲ್ಲ. ಬಿಹಾರವು ಭಾರತದ ಕನ್ನಡಿ, ಭರವಸೆ. ಬಿಹಾರವೆನ್ನುವುದು ಹೆಮ್ಮೆ ಮತ್ತು ಭಾರತದ ಹೆಮ್ಮೆಯಾಗಿದೆ ಎಂದು ತಿಳಿಸಿದ್ದಾರೆ.

ರೈತರು, ಯುವಕರು, ಕಾರ್ಮಿಕರು, ಬಿಹಾರದ ಸಹೋದರ ಸಹೋದರಿಯರು ಬಿಹಾರದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಇದ್ದಾರೆ. ಇಂದು, ಅದೇ ಬಿಹಾರವು ತನ್ನ ಹಳ್ಳಿಗಳು, ಪಟ್ಟಣಗಳು, ನಗರಗಳು, ಹೊಲಗಳು ಮತ್ತು ಕಣಜದಲ್ಲಿ ಹೊಸ ವೈಭವ ಮತ್ತು ಭವಿಷ್ಯಕ್ಕಾಗಿ ಹೊಸ ಬದಲಾವಣೆಗಳಿಗೆ ಸಿದ್ಧವಾಗಿದೆ. ಅದಕ್ಕಾಗಿಯೇ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ನಾನು ಹೇಳಿದೆ. ಮತ ಚಲಾಯಿಸುವ ಶಾಯಿಯ ಬೆರಳು ಈಗ ಪ್ರಶ್ನೆಯೊಂದಿಗೆ ನಿಂತಿದೆ. ನಿರುದ್ಯೋಗ, ವ್ಯವಸಾಯವನ್ನು ಉಳಿಸುವುದು, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ, ಕಡಿವಾಣವಿಲ್ಲದ ಅಪರಾಧಗಳನ್ನು ನಿಲ್ಲಿಸುವುದು, ಸರ್ವಾಧಿಕಾರಿ ಆಡಳಿತದ ಮೇಲೆ ಪ್ರಶ್ನೆಗಳು ಎದುರಾಗಿವೆ ಎಂದು ಹೇಳಿದ್ದಾರೆ.

ಇದು ಕತ್ತಲಿನಿಂದ ಬೆಳಕಿನೆಡೆಗೆ, ಸುಳ್ಳಿನಿಂದ ಸತ್ಯದೆಡೆಗೆ,ವರ್ತಮಾನದಿಂದಭವಿಷ್ಯದೆಡೆಗೆ ಸಾಗುವ ಸಮಯ. ಜ್ಞಾನದ ಭೂಮಿ ಎಂದು ಕರೆಯಲ್ಪಡುವ ಬಿಹಾರದ ಜನರು ಮಹಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಹೊಸ ಬಿಹಾರವನ್ನು ನಿರ್ಮಿಸಲು ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಬಿಹಾರದ ವಿಧಾನಸಭೆ ಚುನಾವಣೆಯು ಮೂರು ಹಂತಗಳಲ್ಲಿ ಅಕ್ಟೋಬರ್ 28, ನವೆಂಬರ್ 3, ಮತ್ತು 7ರಂದು ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.