ADVERTISEMENT

ತೆಲಂಗಾಣದಲ್ಲಿ ಭಾವನಾತ್ಮಕ ಮಾತಿನ ದಾಳ ಉರುಳಿಸಿದ ಸೋನಿಯಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 8:15 IST
Last Updated 24 ನವೆಂಬರ್ 2018, 8:15 IST
   

ಹೈದರಾಬಾದ್:ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾದ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಭಾವನಾತ್ಮಕ ಮಾತುಗಳ ದಾಳ ಉರುಳಿಸಿದ್ದಾರೆ.

ಹೈದರಾಬಾದ್‌ನ ಹೊರವಲಯದಲ್ಲಿ ಶುಕ್ರವಾರ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿಸಿ ಪ್ರಚಾರ ಭಾಷಣ ಮಾಡಿದ ಸೋನಿಯಾ, ‘ನನ್ನ ಹೃದಯ ತೆಲಂಗಾಣ ಜನರ ದುಃಖ, ಯಾತನೆ, ತಳಮಳವನ್ನು ನೋಡುತ್ತಿದೆ. ಜನರು ಬಯಸಿದ ಅಭಿವೃದ್ಧಿ ಮತ್ತು ಸಮಾನ ರಾಜಕೀಯ ನೀತಿಯ ಪಾಲನೆ ಆಗಿಲ್ಲ’ ಎಂದು ಆಡಳಿತಾರೂಢ ಸರ್ಕಾರವನ್ನು ಚುಚ್ಚಿದ್ದಾರೆ.

ಹಿಂದಿನ ನಾಲ್ಕೂವರೆ ವರ್ಷದಲ್ಲಿ ಟಿಆರ್‌ಎಸ್‌ ಸರ್ಕಾರ ನೀಡಿದ್ದ ಭರವಸೆಗಳಾದ ನೀರು, ಅನುದಾನ, ಉದ್ಯೋಗ ಯಾವುದನ್ನೂ ಸರಿಯಾಗಿ ನೀಡಿಲ್ಲ ಎಂದು ಟೀಕಿಸಿದರು.

ADVERTISEMENT

‘ಅನೇಕ ವರ್ಷಗಳ ಬಳಿಕ ಮಕ್ಕಳನ್ನು ನೋಡುತ್ತಿರುವ ತಾಯಿಯಂತೆ ನನಗೆ ಸಂತೋಷವಾಗುತ್ತಿದೆ’ ಎಂದು 2014ರಲ್ಲಿ ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಮೊದಲ ಭೇಟಿ ನೀಡಿರುವ ಸೋನಿಯಾ ಹೇಳುತ್ತಿದ್ದಂತೆ ನೆರೆದಿದ್ದ ಜನ ಕರತಾಡನ ಮಾಡಿದರು.

‘ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಮಾಡುವಲ್ಲಿ ಎದುರಾದ ಸವಾಲುಗಳ ಬಗ್ಗೆ ನನಗೆ ತಿಳಿದಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನ ಹಿತಾಸಕ್ತಿಗಳು ನಮ್ಮ ಹೃದಯದಲ್ಲಿವೆ’ ಎಂದು ಸೋನಿಯಾ ಭಾವನಾತ್ಮಕವಾಗಿ ಹೇಳಿದರು.

ಏನೇ ಆಗಲಿ, ‘ನಿರುದ್ಯೋಗಿ ಯುವಜನರ ಅವಸ್ಥೆ, ರೈತರು ಮತ್ತು ಸ್ವ ಸಹಾಯ ಗುಂಪುಗಳನ್ನು ನಿರ್ಲಕ್ಷಿಸಿರುವುದನ್ನು ನೋಡಿ ನನಗೆ ನೋವಾಗುತ್ತಿದೆ. ನಿಮ್ಮ ಎಷ್ಟು ಕನಸುಗಳುಈಡೇರಿವೆ?’ ಎಂದು ಸಭಿಕರನ್ನು ಕೇಳಿದರು.

ಜನ ಸಂಖ್ಯೆಯಲ್ಲಿ ಹೆಚ್ಚಿನದಾಗಿರುವ ದಲಿತರು, ಆದಿವಾಸಿಗಳು ಮತ್ತು ದುರ್ಬಲರನ್ನು ಟಿಆರ್‌ಎಸ್‌ ಸರ್ಕಾರ ನಿರ್ಲಕ್ಷಿಸಿದೆ ಎಂದ ಸೋನಿಯಾ, ನಾನು ಈ ಹಿಂದೆ ಇಲ್ಲಿ ಭೇಟಿ ಮಾಡಿದ್ದ ಸ್ವ ಸಹಾಯ ಗುಂಪುಗಳ ಯಶಸ್ಸಿನ ಕಥೆಗಳ ಬಗ್ಗೆ ಇತರ ರಾಜ್ಯಗಳ ಜನರಿಗೆ ಸ್ಫೂರ್ಥಿ ಎಂದು ಹೇಳುತ್ತಿದ್ದೆ. ಆದರೆ, ಅವು ಇಂದು ಸರಿಯಾಗಿ ಕೆಲಸ ನಿರ್ವಸಲು ಅವರಿಗೆ ಅಗತ್ಯ ನೆರವು ಸಿಗುತ್ತಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಸೋನಿಯಾ, ಕಳೆದ ನಾಲ್ಕೂವರೆ ವರ್ಷದಿಂದ ರಾಜ್ಯವು ಮಗುವಿನಂತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಟೀಕಿಸಿದರು.

ರೈತರು ಬದುಕಿಗಾಗಿ ಕೇವಲ ಹೆಣಗಾಡುತ್ತಿಲ್ಲ. ಬಲವಂತವಾಗಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ ಎಂದು ಆಡಳಿತಾರೂಡ ಸರ್ಕಾರವನ್ನು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.