ADVERTISEMENT

ಮುಲಾಯಂಗೆ 'ಭಾರತ ರತ್ನ' ನೀಡಲು ಒತ್ತಾಯ: ರಾಷ್ಟ್ರಪತಿಗೆ ಪತ್ರ

ಪಿಟಿಐ
Published 12 ಅಕ್ಟೋಬರ್ 2022, 14:24 IST
Last Updated 12 ಅಕ್ಟೋಬರ್ 2022, 14:24 IST
   

ಲಖನೌ: ಅನಾರೋಗ್ಯದಿಂದ ಸೋಮವಾರ ನಿಧನರಾದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕೆಂದು ಪಕ್ಷದ ಮುಖಂಡ ಐ.ಪಿ. ಸಿಂಗ್ ಒತ್ತಾಯಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಅಲ್ಲದೆ, ಆಗ್ರಾ–ಲಖನೌ ಎಕ್ಸ್‌ಪ್ರೆಸ್ ವೇಗೆ ಮುಲಾಯಂ ಸಿಂಗ್ ಯಾದವ್ ಎಕ್ಸ್‌ಪ್ರೆಸ್ ವೇ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ದೇಶದ ಸಮಾಜವಾದದ ಗೋಲ್ಡನ್ ಚಾಪ್ಟರ್, ಮುಲಾಯಂ ನಿಧನದಿಂದ ಅಂತ್ಯಗೊಂಡಿದೆ. ಅವರು ಸಾಮಾಜಿಕ ನ್ಯಾಯಕ್ಕಾಗಿ ಐತಿಹಾಸಿಕ ಹೋರಾಟ ನಡೆಸಿದ್ದರು. ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಾಗಿಟ್ಟಿದ್ದರು ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಸಿಂಗ್ ತಿಳಿಸಿದ್ದಾರೆ.

ADVERTISEMENT

‘ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಲಾಯಂ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ರಕ್ಷಣಾ ಸಚಿವರಾಗಿದ್ದರು. ಆದರೆ, ಅವರು ಯಾವಾಗಲೂ ತಳಮಟ್ಟದ ನಾಯಕರಾಗಿಯೇ ಉಳಿದಿದ್ದರು. ಬಡವರ ಏಳಿಗೆಗಾಗಿ ದುಡಿದವರು. ಅವರ ನಿಧನದಿಂದ ಇಡೀ ದೇಶ ದುಃಖತಪ್ತವಾಗಿದೆ. ಇಂತಹ ಸಂದರ್ಭದಲ್ಲಿ ಅವರ ಕೋಟ್ಯಂತರ ಬೆಂಬಲಿಗರು ಮತ್ತು ಸಮಾಜವಾದದ ಪ್ರತಿಪಾದಕರ ಭಾವನೆಗೆ ಬೆಲೆ ಕೊಟ್ಟು ಕೂಡಲೇ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಬೇಕು’ಎಂದು ಅವರು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಸಿಂಗ್, ಆಗ್ರಾ–ಲಖನೌ ಎಕ್ಸ್‌ಪ್ರೆಸ್ ವೇಗೆ ಮುಲಾಯಂ ಸಿಂಗ್ ಯಾದವ್ ಎಕ್ಸ್‌ಪ್ರೆಸ್ ವೇ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಅಕ್ಟೋಬರ್ 10ರಂದು, ತೀವ್ರ ಅನಾರೋಗ್ಯದಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.