ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಭಾರತ ಮಂಟಪಮ್ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆಯಲ್ಲಿ ಮಾತನಾಡಿದರು. ಸಚಿವ ಜಿತೇಂದ್ರ ಸಿಂಗ್, ಇಸ್ರೊ ಅಧ್ಯಕ್ಷ ವಿ. ನಾರಾಯಣನ್, ಗಗನಯಾನಿ ಶುಭಾಂಶು ಶುಕ್ಲಾ ಇದ್ದಾರೆ.
ಪಿಟಿಐ ಚಿತ್ರ
ನವದೆಹಲಿ: ಮಾನವತೆಯ ಭವಿಷ್ಯವನ್ನು ಉಜ್ವಲಗೊಳಿಸುವಂಥ ಅಂತರಿಕ್ಷ ರಹಸ್ಯಗಳನ್ನು ಭೇದಿಸುವ ಬಾಹ್ಯಾಕಾಶದ ಆಳ ಅಧ್ಯಯನ ಯೋಜನೆಗಳನ್ನು ಸಾಕಾರಗೊಳಿಸಲು ಸನ್ನದ್ದರಾಗುವಂತೆ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ವಿಡಿಯೊ ಮೂಲಕ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ಭವಿಷ್ಯದ ಯೋಜನೆಗಳಿಗಾಗಿ ಗಗನಯಾತ್ರಿಗಳನ್ನು ಬಹು ಸಂಖ್ಯೆಯಲ್ಲಿ ಹೊಂದಲು ಭಾರತ ಉದ್ದೇಶಿಸಿದೆ. ದೇಶದ ಯುವಜನರು ಕೂಡ ಗಗನಯಾನಿಗಳ ಈ ಗುಂಪಿನಲ್ಲಿ ಸೇರಬೇಕು’ ಎಂದಿದ್ದಾರೆ.
ಅಲ್ಲದೇ, ‘ನಾವು ಈಗಾಗಲೇ ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಕಾಲಿಟ್ಟಿದ್ದೇವೆ. ಬಾಹ್ಯಾಕಾಶದ ಆಳಕ್ಕೂ ಇಣುಕಬೇಕಿದೆ. ಅಲ್ಲಿರುವ ಹಲವು ರಹಸ್ಯಗಳು ಮಾನವತೆಯ ಭವಿಷ್ಯವನ್ನು ಉಜ್ವಲಗೊಳಿಸಲಿವೆ’ ಎಂದಿದ್ದಾರೆ.
ವಿಜ್ಞಾನಿಗಳನ್ನು ಪ್ರಶಂಸಿಸಿರುವ ಪ್ರಧಾನಿ, ‘ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ಹಿಂದೆ ಮತ್ತೊಂದರಂತೆ ಮೈಲಿಗಲ್ಲುಗಳನ್ನು ಸ್ಥಾಪಿಸುವುದು ಭಾರತ ಹಾಗೂ ಭಾರತೀಯ ವಿಜ್ಞಾನಿಗಳ ಗುಣಲಕ್ಷಣವಾಗಿ ಹೋಗಿದೆ. ತಾರಾಗಣದ ಆಚೆಗೂ ದಿಗಂತದ ವ್ಯಾಪ್ತಿ ಇದೆ. ಅಂತ್ಯವೇ ಇಲ್ಲದ ವಿಶ್ವವು ಯಾವುದೇ ಮೊದಲ ಗಡಿಯು ಅಂತಿಮ ಗಡಿಯಲ್ಲ ಎಂಬುದನ್ನು ಸಾರುತ್ತಿದೆ. ಬಾಹ್ಯಾಕಾಶ ವಲಯದಲ್ಲೂ ಅಂತಿಮ ಗಡಿ ಇರಬಾರದು’ ಎಂದು ಪ್ರತಿಪಾದಿಸಿದ್ದಾರೆ.
ಇದೇ ವೇಳೆ, ವಿಜ್ಷಾನ ಕ್ಷೇತ್ರದಲ್ಲಿ ಖಾಸಗಿ ಪಾಲುದಾರರೂ ಕೈ ಜೋಡಿಸುವಂತೆ ಕರೆ ನೀಡಿರುವ ಪ್ರಧಾನಿ, ವರ್ಷಂಪ್ರತಿ 50 ರಾಕೆಟ್ಗಳನ್ನು ಉಡಾವಣೆ ಮಾಡುವ ಹಂತಕ್ಕೆ ನಾವು ತಲುಪಬಹುದೇ? ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬಹುದೇ ಎಂದು ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.