ಕೊಚ್ಚಿ: ಕೊಚ್ಚಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಬಳಿಕ ಕಾಣೆಯಾದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ತಮಿಳುನಾಡಿನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಚ್ಚಿ ಕೇಂದ್ರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿ. ಎಸ್. ನವಾಸ್ ಅವರನ್ನು ತಮಿಳುನಾಡಿನ ಕರೂರು ರೈಲ್ವೆ ನಿಲ್ದಾಣದಲ್ಲಿ ತಮಿಳುನಾಡು ರೈಲ್ವೆ ಪೊಲೀಸರು ಪತ್ತೆ ಮಾಡಿದ್ದಾರೆ. ಅವರನ್ನು ವಾಪಸ್ ಕರೆತರಲು ಪೊಲೀಸರ ತಂಡ ತಮಿಳುನಾಡಿಗೆ ತೆರಳಿದೆ.
ಬುಧವಾರ ರಾತ್ರಿ ವೈರ್ಲೆಸ್ ಮೂಲಕ ಹಿರಿಯ ಅಧಿಕಾರಿಯೊಂದಿಗೆ ನಡೆದ ವಾಗ್ವಾದದ ಬಳಿಕ ಅವರು ಕಾಣೆಯಾಗಿದ್ದರು. ಹಿರಿಯ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದುದರಿಂದ ಅವರು ಕಾಣೆಯಾಗಿದ್ದರು ಎಂದು ನವಾಸ್ ಪತ್ನಿ ಆರೋಪಿಸಿದ್ದರು.
‘ನನ್ನ ಪತಿ ಪ್ರಾಮಾಣಿಕ ಅಧಿಕಾರಿ. ಆದರೆ ಸುಳ್ಳು ಕೇಸು ದಾಖಲಿಸಲು ಹಿರಿಯ ಅಧಿಕಾರಿಗಳು ಒತ್ತಾಯಿಸಿದಾಗ ಅವರು ಒತ್ತಡಕ್ಕೆ ಒಳಗಾಗಿದ್ದರು. ಆದ್ದರಿಂದಲೇ ಅವರು ಮನೆಬಿಟ್ಟು ಹೋಗಿರಬಹುದು’ ಎಂದು ಶುಕ್ರವಾರ ನವಾಸ್ ಅವರ ಪತ್ನಿ ಮಾಧ್ಯಮಗಳ ಜೊತೆ ಹೇಳಿಕೊಂಡಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.