ADVERTISEMENT

ಶ್ರೀನಗರ–ಶಾರ್ಜಾ ವಿಮಾನ ಹಾರಾಟಕ್ಕೆ ಪಾಕಿಸ್ತಾನ ಮಾರ್ಗ ಬಳಕೆ; ಅನುಮತಿ ನಿರಾಕರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2021, 8:38 IST
Last Updated 3 ನವೆಂಬರ್ 2021, 8:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಶಾರ್ಜಾಗೆ ಹಾರಾಟ ನಡೆಸುವ ವಿಮಾನಗಳು ಪಾಕಿಸ್ತಾನದ ವಾಯು ವಲಯವನ್ನು ಬಳಸಿಕೊಳ್ಳಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಶ್ರೀನಗರ–ಶಾರ್ಜಾ ನಡುವಿನ ವಿಮಾನ ಪ್ರಯಾಣ ದರ ಮತ್ತು ಸಮಯ ಏರಿಕೆಯಾಗಲಿದೆ.

ಶ್ರೀನಗರದಿಂದ ಪಾಕಿಸ್ತಾನದ ಮಾರ್ಗವಾಗಿ ವಿಮಾನ ಹಾರಾಟಕ್ಕೆ ಅವಕಾಶ ಸಿಗದಿದ್ದರೆ, ಶಾರ್ಜಾಗೆ ಪ್ರಯಾಣದ ಅವಧಿ ಒಂದು ಗಂಟೆಗಿಂತಲೂ ಹೆಚ್ಚು ಸಮಯ ಏರಿಕೆಯಾಗಲಿದೆ. ವಿಮಾನವು ಶ್ರೀನಗರದಿಂದ ಉದಯಪುರ, ಅಹಮದಾಬಾದ್‌ ಮತ್ತು ಓಮನ್‌ ಮಾರ್ಗವಾಗಿ ಶಾರ್ಜಾ ತಲುಪಬೇಕಾಗುತ್ತದೆ, ಹಾಗಾಗಿ ವಿಮಾನ ಪ್ರಯಾಣ ದರವೂ ದುಬಾರಿಯಾಗುತ್ತದೆ.

ಪಾಕಿಸ್ತಾನದ ನಡೆಯು ದುರದೃಷ್ಟಕರ ಎಂದಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ, '2009-2010ರಲ್ಲೂ ಪಾಕಿಸ್ತಾನವು ಶ್ರೀನಗರ–ದುಬೈ ನಡುವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಚಾರಕ್ಕೆ ಇದೇ ರೀತಿ ಮಾಡಿತ್ತು. ಆದರೆ, ಗೋ ಫಸ್ಟ್‌ ವಿಮಾನವನ್ನು ಪಾಕಿಸ್ತಾನದ ವಾಯು ವಲಯದಲ್ಲಿ ಹಾರಾಟ ನಡೆಸಲು ಅನುಮತಿಸುವ ವಿಶ್ವಾಸವಿತ್ತು, ಆದರೆ ಅದು ಆಗಿಲ್ಲ... ' ಎಂದು ಟ್ವೀಟಿಸಿದ್ದಾರೆ.

ADVERTISEMENT

ಶ್ರೀನಗರ ಮತ್ತು ಯುಎಇ ನಡುವಿನ ನೇರ ವಿಮಾನ ಹಾರಾಟವು 11 ವರ್ಷಗಳ ನಂತರ ಪುನರಾರಂಭಗೊಂಡಿದೆ. ಅಕ್ಟೋಬರ್‌ 23ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಶ್ರೀನಗರ–ಶಾರ್ಜಾ ವಿಮಾನ ಯಾನಕ್ಕೆ ಶೇಖ್‌ ಉಲ್‌–ಆಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ್ದರು.

ವಿಮಾನ ಮಾರ್ಗದ ಉದ್ಘಾಟನೆಯ ಬೆನ್ನಲ್ಲೇ ಓಮರ್‌ ಅಬ್ದುಲ್ಲಾ, 'ಪಾಕಿಸ್ತಾನವು ತನ್ನ ವಾಯು ವಲಯ ಬಳಕೆಗೆ ಅವಕಾಶ ನೀಡಿದೆಯೇ' ಎಂದು ಪ್ರಶ್ನಿಸಿದ್ದರು.

ಪ‍್ರಸ್ತುತ ಗೊಏರ್‌ ವಿಮಾನಯಾನ ಸಂಸ್ಥೆಯು ಶ್ರೀನಗರದಿಂದ ಶಾರ್ಜಾಗೆ ವಾರದಲ್ಲಿ ನಾಲ್ಕು ವಿಮಾನಗಳ ಹಾರಾಟ ಕಾರ್ಯಾಚರಣೆಗೆ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.