ADVERTISEMENT

ಪಟಾಕಿ ನಿಷೇಧ: ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಟಾಲಿನ್ ಪತ್ರ

ಪಟಾಕಿ ನಿಷೇಧ ನಿಯಮ ಮರುಪರಿಶೀಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 15:01 IST
Last Updated 15 ಅಕ್ಟೋಬರ್ 2021, 15:01 IST
ಪಟಾಕಿಗಳು (ಸಾಂದರ್ಭಿಕ ಚಿತ್ರ)
ಪಟಾಕಿಗಳು (ಸಾಂದರ್ಭಿಕ ಚಿತ್ರ)   
ಚೆನ್ನೈ: ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧವನ್ನು ಜಾರಿಗೊಳಿಸಿರುವ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಒಡಿಶಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ನಿಷೇಧವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
‘ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ನಿಗದಿಪಡಿಸಿರುವ ಮಾನದಂಡಗಳ ಅಡಿಯಲ್ಲಿ ಬರುವ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಬೇಕು’ ಎಂದೂ ಕೋರಿದ್ದಾರೆ.
‘ಪಟಾಕಿ ಉದ್ಯಮವು ಶಿವಕಾಶಿ ಪಟ್ಟಣದ ಸುತ್ತಲೂ ಕೇಂದ್ರೀಕೃತವಾಗಿದ್ದು, ತಮಿಳುನಾಡಿನ ಪ್ರಮುಖ ಕೈಗಾರಿಕಾ ಚಟುವಟಿಕೆಗಳಲ್ಲಿ ಒಂದಾಗಿದೆ. ರಾಜ್ಯದ ಸುಮಾರು 8 ಲಕ್ಷ ಕಾರ್ಮಿಕರು ಪಟಾಕಿ ಉದ್ಯಮವನ್ನು ಅವಲಂಬಿಸಿದ್ದಾರೆ, ಇದು ದೇಶದಲ್ಲಿಯೇ ದೊಡ್ಡದು. ಹಬ್ಬದ ಸಮಯದಲ್ಲಿ ಪಟಾಕಿ ನಿಷೇಧ ಜಾರಿಗೆ ತಂದಿರುವ ಬಗ್ಗೆ ಮರುಪರಿಶೀಲಿಸಬೇಕೆಂದು’ ಎಂದಿದ್ದಾರೆ.
‘ಸುಪ್ರೀಂ ಕೋರ್ಟ್ ಈಗಾಗಲೇ ಕೆಲವು ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧಿಸಿದೆ. ಅಲ್ಲದೆ ಈಗ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದೆ ಎಂಬ ಅಂಶವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಪಟಾಕಿಗಳ ಮೇಲೆ ಏಕಾಏಕಿ ನಿಷೇಧವು ಸಮಂಜಸವಲ್ಲ. ಇತರ ದೇಶಗಳಲ್ಲಿ ಈ ರೀತಿಯ ನಿಷೇಧ ಜಾರಿಯಲ್ಲಿಲ್ಲ. ಇತರ ರಾಜ್ಯಗಳು ನಿಷೇಧ ಹೇರಿದಲ್ಲಿ ಇಡೀ ಪಟಾಕಿ ಉದ್ಯಮವನ್ನು ಮುಚ್ಚಬೇಕಾಗುತ್ತದೆ. ಇದು 8 ಲಕ್ಷ ಕಾರ್ಮಿಕರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ’ ಎಂದೂ ಅವರು ವಿವರಿಸಿದ್ದಾರೆ.
‘ಪಟಾಕಿಗಳನ್ನು ಸಿಡಿಸುವುದು ಭಾರತೀಯ ಹಬ್ಬಗಳ ಅದರಲ್ಲೂ ವಿಶೇಷವಾಗಿ ದೀಪಾವಳಿಯ ಅವಿಭಾಜ್ಯ ಅಂಗವಾಗಿದೆ ಎಂದು ನೀವೂ ಒಪ್ಪಿಕೊಳ್ಳುತ್ತೀರಿ. ಪರಿಸರ, ಜೀವನೋಪಾಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸೂಕ್ತವಾದ ಸಮತೋಲಿತ ವಿಧಾನವನ್ನು ಸಾಧ್ಯವಾಗಿಸುವುದು ಅಗತ್ಯವಾಗಿದೆ’ ಎಂದು ಸ್ಟಾಲಿನ್ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.