ಮೀರ್ವೈಜ್ ಉಮರ್ ಫಾರೂಕ್
ಶ್ರೀನಗರ(ಪಿಟಿಐ): ‘ದೆಹಲಿ ಸ್ಫೋಟದ ನಂತರ ದೇಶದಾದ್ಯಂತ ಕಾಶ್ಮೀರಿಗಳಿಗೆ ‘ಕಿರುಕುಳ’ ನೀಡಲಾಗುತ್ತಿದ್ದು, ತಕ್ಷಣವೇ ಅದನ್ನು ನಿಲ್ಲಿಸಬೇಕು’ ಎಂದು ಹುರಿಯತ್ ಕಾನ್ಫರನ್ಸ್ ಅಧ್ಯಕ್ಷ ಮೀರ್ವೈಜ್ ಉಮರ್ ಫಾರೂಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಕಾಶ್ಮೀರಿಗಳು ಕಿರುಕುಳಕ್ಕೆ ಒಳಗಾಗಿರುವ ವರದಿಗಳು ಬರುತ್ತಿವೆ. ದೆಹಲಿ ಸ್ಪೋಟದ ನಂತರ, ಕಾಶ್ಮೀರಿಗಳೆಂಬ ಕಾರಣಕ್ಕೆ ಅವರನ್ನು ಪ್ರಶ್ನಿಸಲಾಗುತ್ತಿದೆ. ಇದು ಬಹಳ ಬೇಸರ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
‘ದೇಶಾದ್ಯಂತ ಅಧ್ಯಯನ ಮಾಡುತ್ತಿರುವ ಅಥವಾ ಉದ್ಯೋಗದಲ್ಲಿರುವ ಕಾಶ್ಮೀರಿಗಳ ಮೇಲಿನ ಕಿರುಕುಳವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿರುವ ಅವರು, ‘ಕಾಶ್ಮೀರದ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಅಧಿಕಾರಿಗಳ ಜವಾಬ್ದಾರಿಯೂ ಆಗಿದೆ’ ಎಂದು ಹೇಳಿದರು.
‘ಕಳೆದ ವಾರ ಕಾಶ್ಮೀರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಜೀವ ಕಳೆದುಕೊಂಡಿದ್ದಾರೆ. ಇದು ಅತ್ಯಂತ ನೋವಿನ ಘಟನೆ. ವಶಪಡಿಸಿಕೊಂಡಿದ್ದ ವಸ್ತುಗಳನ್ನು ಜವಾಬ್ದಾರಿಯುತವಾಗಿ ಸಂಗ್ರಹಿಸಿ, ನಿರ್ವಹಣೆ ಮಾಡಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿ, ಈ ಜೀವ ಹಾನಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.