ADVERTISEMENT

ಮಾಧ್ಯಮಗಳು ಸುಶಾಂತ್ ಪ್ರಕರಣದ ವಿಚಾರಣೆ ನಿಲ್ಲಿಸಲಿ: ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಪಿಟಿಐ
Published 28 ಆಗಸ್ಟ್ 2020, 3:06 IST
Last Updated 28 ಆಗಸ್ಟ್ 2020, 3:06 IST
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್    

ಮುಂಬೈ: ಸುದ್ದಿ ವಾಹಿನಿಗಳು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದನ್ನು ನಿಲ್ಲಿಸಲು ಸೂಚಿಸಿಎಂದು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ನೀಲೇಶ್ ನಲ್ವಾಕಾ ಮತ್ತು ಇಬ್ಬರು ವ್ಯಕ್ತಿಗಳು ಬುಧವಾರ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಯಬೇಕಿದೆ.

ಸುದ್ದಿವಾಹಿನಿಗಳು ಸುಶಾಂತ್ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರ ಮತ್ತು ತನಿಖೆ ಬಗ್ಗೆ ಸುದ್ದಿ ಮಾಡುವುದಕ್ಕೆ ಮಿತಿ ಇರಬೇಕು. ಸುದ್ದಿವಾಹಿನಿಗಳ ಈ ರೀತಿಯ ವಿಚಾರಣೆಯು ಸಿಬಿಐ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜೂನ್ 14ರಂದು ಸುಶಾಂತ್ ಆತ್ಮಹತ್ಯೆಯಿಂದ ಸಾವಿಗೀಡಾದ ನಂತರ ಹಲವಾರು ಸುದ್ದಿವಾಹಿನಿಗಳು ಈ ಪ್ರಕರಣದ ವಿಚಾರಣೆ ಮತ್ತು ಅದೇ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ಟಿವಿ ಚಾನೆಲ್ ಮತ್ತು ಇತರ ಮಾಧ್ಯಮಗಳು ಈಗಾಗಲೇ ಆರೋಪಿಗೆ ಶಿಕ್ಷೆ ವಿಧಿಸುವ ಕಾರ್ಯಗಳನ್ನು ಮಾಡುತ್ತಿವೆ. ಈ ರೀತಿಯ ಸದೃಶ ತನಿಖೆಗಳು ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾನೂನಿನ ವಿಧಿಯ ಉಲ್ಲಂಘನೆಯಾಗಿದೆ. ಸುಶಾಂತ್ ಪ್ರಕರಣದ ಬಗ್ಗೆ ವರದಿಗಾರಿಕೆ, ಚರ್ಚೆ ಮತ್ತು ಯಾವುದೇ ರೀತಿಯ ವಿಚಾರಣೆಗಳನ್ನು ನಡೆಸುವುದನ್ನು ಮಾಧ್ಯಮಗಳು ಮುಂದೂಡಲಿ. ಇದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಹಲವಾರು ಸುದ್ದಿವಾಹಿನಿಗಳ ವಿರುದ್ಧವೂ ಅರ್ಜಿದಾರರುಮೊಕದ್ದಮೆ ಹೂಡಿದ್ದಾರೆ.ಕೆಲವು ಸುದ್ದಿವಾಹಿನಿಗಳ ವಿರುದ್ಧ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಅಪ್ಪ ದೂರು ನೀಡಿದ್ದು ಪ್ರಕರಣದ ವಿಚಾರಣೆಯನ್ನು ಸಿಬಿಐ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.