ADVERTISEMENT

ಲಖನೌ: ವಾರಾಂತ್ಯದಲ್ಲಿ ಕಠಿಣ ನಿರ್ಬಂಧಕ್ಕೆ ನಿರ್ಧಾರ

ಪಿಟಿಐ
Published 12 ಜುಲೈ 2020, 11:10 IST
Last Updated 12 ಜುಲೈ 2020, 11:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ವಾರಾಂತ್ಯದಲ್ಲಿ ಕಠಿಣ ಲಾಕ್‌ಡೌನ್‌ ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ಧಾರೆ.

ಶನಿವಾರದವರೆಗೆ ರಾಜ್ಯದಲ್ಲಿ ಸೋಂಕು ಪ್ರಕರಣ 35 ಸಾವಿರ ಗಡಿ ದಾಟಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

‘ಮುಂದಿನ ಶನಿವಾರದಿಂದಲೇ ನಿರ್ಬಂಧ ಜಾರಿಯಾಗಲಿದೆ.ವಿಶೇಷವಾಗಿ ಜನದಟ್ಟಣೆ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ಇರಲಿದ್ದು, ಮಾರುಕಟ್ಟೆ ಮತ್ತು ಕಚೇರಿಗಳು ಬಂದ್‌ ಆಗಿರಲಿವೆ. ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ’ ಎಂದುಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಮತ್ತು ಮಾಹಿತಿ) ಅವನೀಶ್‌ ಅವಸ್ಥಿ ತಿಳಿಸಿದ್ದಾರೆ.

ADVERTISEMENT

‘ಜನರ ಅನಗತ್ಯ ಓಡಾಟವನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಅಷ್ಟೇನ್ನೂ ಸಮಸ್ಯೆ ಆಗುವುದಿಲ್ಲ’ ಎಂದಿದ್ದಾರೆ.

ಕಳೆದ ಶುಕ್ರವಾರಬೆಳಿಗ್ಗೆ 10 ಗಂಟೆಯಿಂದ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಸೋಮವಾರ ಬೆಳಿಗ್ಗೆ 5 ವರೆಗೆ ಮುಂದುವರಿಯಲಿದೆ.ಅಗತ್ಯ ಸೇವೆಗಳು ಮತ್ತು ಧಾರ್ಮಿಕ ಸ್ಥಳಗಳನ್ನು ನಿರ್ಬಂಧ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಸಾರ್ವಜನಿಕ ಸಾರಿಗೆಗಳು ರಸ್ತೆ ಗಿಳಿಯಲಿಲ್ಲ. ಪ್ರಮುಖ ಮಾರುಕಟ್ಟೆಗಳು ಬಂದ್ ಆಗಿದ್ದವು.

ವಾರಾಂತ್ಯ ಅಂಗಡಿಗಳ ಸ್ಯಾನಿಟೈಸ್‌ಗೆ ಸೂಚನೆ

ವಾರಾಂತ್ಯದಲ್ಲಿ ಎಲ್ಲಾ ಮಾರುಕಟ್ಟೆಗಳು ಬಂದ್‌ ಆಗಿರುವುದರಿಂದ, ಈ ಸಂದರ್ಭದಲ್ಲಿ ಎಲ್ಲಾಅಂಗಡಿಗಳನ್ನು ಸ್ಯಾನಿಟೈಸ್‌ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಕೋವಿಡ್‌ ಆಸ್ಪತ್ರೆಗಳಲ್ಲಿ 2 ದಿನಗಳವರೆಗೆ ಹೆಚ್ಚುವರಿ ಆಮ್ಲಜನಕ ವ್ಯವಸ್ಥೆ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಕೈಗಾರಿಕ ಘಟಕಗಳನ್ನು ಶನಿವಾರ ಮತ್ತು ಭಾನುವಾರ ಸ್ವಚ್ಛಗೊಳಿಸಬೇಕು.ರಾಜ್ಯದಲ್ಲಿ ದಿನಕ್ಕೆ 50 ಸಾವಿರ ಸೋಂಕು ಪತ್ತೆ ಪರೀಕ್ಷೆ ನಡೆಸುವಂತಾಗಬೇಕುಎಂದು ಇದೇ ವೇಳೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.