ಕೊಯಮತ್ತೂರು:ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದು ಮಾಡುವಂತೆ ಕೋರುವ ಮನವಿಪತ್ರವೊಂದನ್ನು ಎಸ್ಎಫ್ಐ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಭಾವಚಿತ್ರಕ್ಕೆ ಮಂಗಳವಾರ ಸಲ್ಲಿಸಿದ್ದಾರೆ.
ಸರ್ಕಾರದ ಗಮನ ಸೆಳೆಯುವ ತಂತ್ರದ ಭಾಗವಾಗಿ ವಿದ್ಯಾರ್ಥಿಗಳು ಈ ರೀತಿ ಮಾಡಿದ್ದಾರೆ ಎಂದು ಸಂಘಟನೆ ಹೇಳಿದೆ.
ಕೋವಿಡ್ ಹಿನ್ನೆಲೆಯಲ್ಲಿ ನೀಟ್ ಅನ್ನು ಮುಂದೂಡಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.
ಅಲ್ಲದೇ, ‘ಜಯಲಲಿತಾ ಅವರು ನೀಟ್ಗೆ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಈಗಿನ ಮುಖ್ಯಮಂತ್ರಿ ಹಾಗೂ ಸಚಿವರು ಜಯಲಲಿತಾ ಅವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ಸರ್ಕಾರವನ್ನು ‘ಅಮ್ಮ ಸರ್ಕಾರ‘ ಎಂತಲೂ ಕರೆದಿದ್ದಾರೆ. ಇದೇ ಕಾರಣಕ್ಕಾಗಿ ಮನವಿ ಪತ್ರವನ್ನು ಜಯಲಲಿತಾ ಭಾವಚಿತ್ರಕ್ಕೆ ಅರ್ಪಿಸುವ ಮಾರ್ಗ ಆರಿಸಿಕೊಂಡಿದ್ದೇವೆ‘ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬ ಆಸೆ ಕೈಗೂಡದ ಕಾರಣ ಎಸ್.ಅನಿತಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡು ಒಂದು ವರ್ಷ ಗತಿಸಿದೆ. ಆಕೆಯ ನೆನಪಿಗಾಗಿಯೂ ಈ ರೀತಿ ಮನವಿಪತ್ರ ಅರ್ಪಿಸಲಾಗಿದೆ ಎಂದು ಸಂಘಟನೆ ಹೇಳಿದೆ.
ನಂತರ, ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕೆ.ರಾಜಾಮಣಿ ಅವರಿಗೂ ಮನವಿಪತ್ರ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.