ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದಲ್ಲಿ ಉದ್ಭವಿಸುವ ವಾಯುಮಾಲಿನ್ಯ ಸಮಸ್ಯೆ ನಿಯಂತ್ರಿಸಲು ತೆಗೆದುಕೊಂಡ ಕಾರ್ಯಯೋಜನೆಗಳನ್ನು ಸೆ.21ರೊಳಗಾಗಿ ಸಲ್ಲಿಸುವಂತೆ ತಮ್ಮ ಇಲಾಖೆ ಹಾಗೂ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಗೆ, ಪರಿಸರ ಇಲಾಖೆ ಸಚಿವ ಗೋಪಾಲ್ ರೈ ಮಂಗಳವಾರ ಸೂಚಿಸಿದ್ದಾರೆ.
ಕಾರ್ಯಯೋಜನೆಗಳನ್ನು ರಚಿಸುವ ಸಂದರ್ಭದಲ್ಲಿ ವಾಯುಗುಣಮಟ್ಟ ಕಡಿಮೆಯಾಗಲು ಕಾರಣಗಳೇನು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲು ರೈ ತಿಳಿಸಿದ್ದಾರೆ.
‘ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದು, ರಸ್ತೆಯಲ್ಲಿನ ದೂಳು, ಕಟ್ಟಡ ನಿರ್ಮಾಣ ಚಟುವಟಿಕೆ, ತ್ಯಾಜ್ಯ ಸುಡುವುದು, ಕೈಗಾರಿಕೆಗಳು ಮತ್ತು ವಾಹನಗಳ ಹೊಗೆಯಿಂದಾಗಿ ಚಳಿಗಾಲದಲ್ಲಿ ದೆಹಲಿಯ ವಾಯುಗುಣಮಟ್ಟ ಕುಸಿಯುತ್ತಿದೆ. ಈ ಸಮಸ್ಯೆಗಳಿಗೆ ಪ್ರತ್ಯೇಕ ಪರಿಹಾರ ಸೂಚಿಸಿ ಕಾರ್ಯಯೋಜನೆ ರೂಪಿಸಬೇಕು’ ಎಂದು ಸಚಿವರು ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ದೆಹಲಿಯಲ್ಲಿ ಪ್ರತಿ ಚಳಿಗಾಲದಲ್ಲಿ ವಾಯುಗುಣಮಟ್ಟ ಕುಸಿಯಲು ಹರಿಯಾಣ ಮತ್ತು ಪಂಜಾಬ್ನ ರೈತರು ಕೃಷಿ ತ್ಯಾಜ್ಯ ಸುಡುವುದೇ ಪ್ರಮುಖ ಕಾರಣವಾಗಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.