ನವದೆಹಲಿ: ಸಕ್ಕರೆ ರಫ್ತು ಮೇಲಿನ ನಿರ್ಬಂಧವನ್ನು ಅಕ್ಟೋಬರ್ 31ರ ನಂತರವೂ ಮುಂದುವರಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಹಬ್ಬದ ಋತುವಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸರಕುಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಹಿಂದೆ ಅಕ್ಟೋಬರ್ 31ರವರೆಗೆ ನಿರ್ಬಂಧ ವಿಧಿಸಿತ್ತು.
ಕಚ್ಚಾ ಸಕ್ಕರೆ, ಬಿಳಿ ಸಕ್ಕರೆ, ಸಂಸ್ಕರಿತ ಸಕ್ಕರೆ ಹಾಗೂ ಸಾವಯವ ಸಕ್ಕರೆ ಮೇಲಿನ ರಪ್ತು ನಿರ್ಬಂಧವನ್ನು ಅಕ್ಟೋಬರ್ 31 ರಿಂದ ಮುಂದಿನ ಆದೇಶದವರೆಗೂ ವಿಸ್ತರಿಸಲಾಗಿದೆ. ಇತರ ಷರತ್ತುಗಳಲ್ಲಿ ಬದಲಾವಣೆ ಇಲ್ಲ’ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ(ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.
ಜಗತ್ತಿಗೆ ಸಕ್ಕರೆ ರಫ್ತು ಮಾಡುವಲ್ಲಿ ಭಾರತ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದೆ.
ಉತ್ಪಾದನೆ, ಬಳಕೆ, ರಫ್ತುಗಳು ಮತ್ತು ದೇಶದಾದ್ಯಂತ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಬೆಲೆ ಸೇರಿದಂತೆ ಸಕ್ಕರೆ ವಲಯದಲ್ಲಿನ ಪರಿಸ್ಥಿತಿಯನ್ನು ಸರ್ಕಾರವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.