ADVERTISEMENT

ನೇಣಿಗೇರಿಸುವ ಸಿಬ್ಬಂದಿಗೆ ಬೇಡಿಕೆ ಬಂದಿರುವುದು ನಿಜ: ಎಡಿಜಿ ಆನಂದ್ ಕುಮಾರ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 12:07 IST
Last Updated 12 ಡಿಸೆಂಬರ್ 2019, 12:07 IST
   

ನವದೆಹಲಿ: ಮರಣದಂಡನೆಗೆ ಒಳಗಾದ ಅಪರಾಧಿಗಳನ್ನು ನೇಣಿಗೇರಿಸುವ ಇಬ್ಬರು ಸಿಬ್ಬಂದಿಯನ್ನು ಕಳುಹಿಸಿಕೊಡಿ ಎಂದು ತಿಹಾರ್ ಜೈಲಿನ ಅಧೀಕ್ಷಕರು ಪತ್ರಮುಖೇನ ಮನವಿ ಮಾಡಿದ್ದಾರೆ ಎಂದು ಉತ್ತರ ಪ್ರದೇಶಬಂಧೀಖಾನೆ ಹೆಚ್ಚುವರಿ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ.

ಇದರಿಂದಾಗಿ ದೆಹಲಿ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಊಹಾಪೋಹಗಳು ಖಚಿತವಾಗಬಹುದು. ತಿಹಾರ್ ಜೈಲಿನ ಅಧೀಕ್ಷಕರ ಮನವಿ ಮೇರೆಗೆ ನೇಣಿಗೇರಿಸುವ ಇಬ್ಬರು ಸಿಬ್ಬಂದಿಯನ್ನು ಆದಷ್ಟು ಬೇಗ ಕಳುಹಿಸಲಾಗುವುದು ಎಂದು ಆನಂದಕುಮಾರ್ ಸುದ್ದಿ ಸಂಸ್ಥೆಗೆ ಖಚಿತಪಡಿಸಿದ್ದಾರೆ.

ದೆಹಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಾದಅಕ್ಷಯ್, ರಾಮ್ ಸಿಂಗ್, ಮುಖೇಶ್, ವಿನಯ್ ಶರ್ಮಾ ಹಾಗೂ ಪವನ್ ಗುಪ್ತಾ ಎಂಬುವರಿಗೆ ಮರಣದಂಡನೆ ತೀರ್ಪು ವಿಧಿಸಿ ಒಂದು ವರ್ಷ ಕಳೆದಿದ್ದರೂ ಆರೋಪಿಗಳು ತಿಹಾರ್ ಜೈಲಿನಲ್ಲಿಯೇ ಇದ್ದಾರೆ.

ಇತ್ತೀಚೆಗೆ ತೆಲಂಗಾಣದಲ್ಲಿ ಪಶುವೈದ್ಯೆಯೊಬ್ಬರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಲ್ಕು ಮಂದಿಯನ್ನು ಅಲ್ಲಿನ ಪೊಲೀಸರು ಎನ್ ಕೌಂಟರ್ ಮಾಡುವ ಮೂಲಕ ಪ್ರಕರಣಕ್ಕೆ ಅಂತ್ಯ ಕಾಣಿಸಿದ್ದರು. ಈ ಬೆಳವಣಿಗೆಗಳ ನಂತರ ಇಡೀ ರಾಷ್ಟ್ರದಲ್ಲಿ ದೆಹಲಿ ಅತ್ಯಾಚಾರಿಗಳನ್ನು ಮರಣದಂಡನೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿಬಂದಿದ್ದವು. ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದೀಗ ಉತ್ತರಪ್ರದೇಶ ಬಂಧೀಖಾನೆ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕರು ಇದನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.