ADVERTISEMENT

ಆಜೀವ ನಿಷೇಧ ಶಿಕ್ಷೆಯಿಂದ ಶ್ರೀಶಾಂತ್‌ಗೆ ಮುಕ್ತಿ: ಸುಪ್ರೀಂಕೋರ್ಟ್‌

ಏಜೆನ್ಸೀಸ್
Published 15 ಮಾರ್ಚ್ 2019, 6:31 IST
Last Updated 15 ಮಾರ್ಚ್ 2019, 6:31 IST
ಶ್ರೀಶಾಂತ್‌
ಶ್ರೀಶಾಂತ್‌   

ನವದೆಹಲಿ:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟಿಗ ಎಸ್. ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.

2013ರ ಐಪಿಎಲ್‌ ‘ಸ್ಪಾಟ್ ಫಿಕ್ಸಿಂಗ್' ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ್‌ ರಾಯಲ್ಸ್ ತಂಡದ ವೇಗಿ ಎಸ್. ಶ್ರೀಶಾಂತ್ ಅವರನ್ನು ಬಿಸಿಸಿಐ ಅಜೀವ ನಿಷೇಧದ ಶಿಕ್ಷೆ ನೀಡಿತ್ತು.

ಬಿಸಿಸಿಐ ಹೇರಿದ್ದ ನಿಷೇಧ ತೆರವುಗೊಳಿಸಬೇಕೆಂದು ಮನವಿ ಮಾಡಿ ಶ್ರೀಶಾಂತ್‌ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಆದರೆ, ಕೇರಳ ಹೈಕೋರ್ಟ್‌ ಬಿಸಿಸಿಐ ನಿರ್ಧಾರವನ್ನೇ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ವನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಮತ್ತು ಕೆ.ಎಂ. ಜೋಸೆಫ್‌ ಅವರನ್ನೊಳಗೊಂಡ ವಿಭಾಗೀಯ ಪೀಠ, ‘ಶ್ರೀಶಾಂತ್‌ ಅವರಿಗೆ ನೀಡಿದ್ದ ಶಿಕ್ಷೆಯ ಪ್ರಮಾಣದ ಬಗ್ಗೆ ಬಿಸಿಸಿಐ 3 ತಿಂಗಳೊಳಗೆ ಮರುಪರಿಶೀಲನೆ ಮಾಡಬೇಕು’ ಎಂದು ನಿರ್ದೇಶಿಸಿದೆ.

‘ಶ್ರೀಶಾಂತ್‌ ಅವರ ಮೇಲಿರುವ ಕ್ರಿಮಿನಲ್‌ ಮೊಕದ್ದಮೆಗಳ ಮೇಲೆ ಈ ತೀರ್ಪು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ.

2015ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ವಿಚಾರಣಾ ನ್ಯಾಯಾಲಯ,ಸಾಕ್ಷ್ಯಾಧಾರಗಳ ಕೊರತೆಯಿಂದಆರೋಪಿಗಳಾಗಿದ್ದ ಶ್ರೀಶಾಂತ್, ಚವ್ಹಾಣ್, ಚಾಂಡಿಲ ನಿರ್ದೋಷಿ ಎಂದು ತೀರ್ಪು ನೀಡಿತ್ತು. ದೆಹಲಿ ಪೊಲೀಸರು ಈ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಮೇಲ್ವನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.