
ನವದೆಹಲಿ: ‘ತನ್ನ ಕೆಲವು ನಿಯಮಗಳ ಮೂಲಕ ದೆಹಲಿ ಮಹಾನಗರ ಪಾಲಿಕೆ, ಬೀದಿ ನಾಯಿಗಳೊಂದಿಗೆ ‘ಅಮಾನವೀಯ’ ವರ್ತನೆ ತೋರುತ್ತಿದೆ’ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ‘ನಾವು ಕೆಲವು ವಿಡಿಯೊಗಳನ್ನು ತೋರಿಸುತ್ತೇವೆ, ಆಮೇಲೆ ನಿಮ್ಮನ್ನೇ ಕೇಳುತ್ತೇವೆ. ಮಾನವೀಯತೆ ಎಂದರೆ ಏನು ಎಂಬುದಾಗಿ’ ಎಂದಿತು.
‘ಈ ಅರ್ಜಿಯ ವಿಚಾರಣೆಯನ್ನು ಮೂವರು ನ್ಯಾಯಮೂರ್ತಿಗಳ ಪೀಠವು ಗುರುವಾರ ನಡೆಸಬೇಕಿತ್ತು. ಆದರೆ, ಅದು ರದ್ದಾಯಿತು’ ಎಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ತಿಳಿಸಿದರು. 2026ರ ಜನವರಿ 7ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿತು.
‘ಸಮಸ್ಯೆ ಏನೆಂದರೆ, ಪೀಠವು ನೀಡಿದ್ದ ನಿರ್ದೇಶನಗಳಿಗೆ ಸಂಪೂರ್ಣ ವ್ಯತಿರಿಕ್ತವಾದ ನಿಯಮಗಳನ್ನು ಪಾಲಿಕೆ ರೂಪಿಸಿದೆ. ಶುಕ್ರವಾರವೇ ಈ ಅರ್ಜಿಯ ವಿಚಾರಣೆ ನಡೆಸಿ. ಯಾಕೆಂದರೆ, ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಪಾಲಿಕೆ ಇದೇ ತಿಂಗಳಿನಿಂದಲೇ ಕಾರ್ಯಗತ ಮಾಡಲಿದೆ. ಆದರೆ, ಬೀದಿ ನಾಯಿಗಳಿಗೆ ಆಶ್ರಯ ತಾಣಗಳೇ ಇಲ್ಲ’ ಎಂದು ಸಿಬಲ್ ವಾದಿಸಿದರು.
‘ಇರಲಿ, ಸಿಬಲ್ ಅವರೆ. ಅವರು ಅವರ ಕೆಲಸ ಮಾಡಲಿ’ ಎಂದು ಪೀಠ ಹೇಳಿತು. ‘ಬೀದಿ ನಾಯಿಗಳಿಗೆ ಆಶ್ರಯ ತಾಣಗಳಿಲ್ಲ. ಅವುಗಳ ಮೇಲೆ ಅಮಾನವೀಯ ವರ್ತನೆ ತೋರಲಾಗುತ್ತಿದೆ’ ಎಂದು ಸಿಬಲ್ ಹೇಳಿದರು.
‘ಸರಿ ಹಾಗಾದರೆ, ಮುಂದಿನ ವಿಚಾರಣೆಯ ವೇಳೆ ನಾವು ನಿಮಗೆ ವಿಡಿಯೊವನ್ನು ತೋರಿಸುತ್ತೇವೆ. ಆಮೇಲೆ ನಿಮ್ಮನ್ನೇ ಕೇಳುತ್ತೇವೆ ಮಾನವೀಯತೆ ಎಂದರೆ ಏನು ಎಂಬುದಾಗಿ’ ಎಂದು ಪೀಠ ಪ್ರತಿಕ್ರಿಯಿಸಿತು. ‘ಏನಾಗುತ್ತಿದೆ ಎಂಬುದರ ಬಗ್ಗೆ ನಾವೂ ವಿಡಿಯೊ ತೋರಿಸುತ್ತೇವೆ’ ಎಂದು ಸಿಬಲ್ ಹೇಳಿದರು. ಮುಂದಿನ ವಿಚಾರಣೆಯನ್ನು ಜ.7ಕ್ಕೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.