ನವದೆಹಲಿ: ಭಯೋತ್ಪಾದನಾ ಚಟುವಟಿಕೆಯ ಜೊತೆ ನಂಟು ಹೊಂದಿರುವ ತ್ರಿವಳಿ ಕೊಲೆ ಪ್ರಕರಣದ ಅಪರಾಧಿ ಗುಲಾಂ ಮೊಹಮ್ಮದ್ ಭಟ್ನನ್ನು ಅವಧಿಪೂರ್ವ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಆದರೆ, ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ಪೀಠವು, ಬಾಕಿ ಇರುವ ಮತ್ತೊಂದು ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿತು.
27 ವರ್ಷ ಶಿಕ್ಷೆ ಅನುಭವಿಸಿರುವುದರಿಂದ, ಬಿಡುಗಡೆ ಮಾಡುವಂತೆ ಕೋರಿ ಭಟ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.
ಹಿರಿಯ ವಕೀಲ ಗೋನ್ಸಾಲ್ವೆಸ್ ಅವರು ಭಟ್ ಪರ ವಾದ ಮಂಡಿಸಿದರೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಕೇಂದ್ರಾಡಳಿತ ಪ್ರದೇಶವನ್ನು ಪ್ರತಿನಿಧಿಸಿದರು.
ಸೇನಾ ಮಾಹಿತಿದಾರರ ನಿವಾಸಕ್ಕೆ ನುಗ್ಗಿ ಎಕೆ–47 ರೈಫಲ್ನಿಂದ ಗುಂಡಿನ ದಾಳಿ ನಡೆಸಿದ್ದರಿಂದ ಮೂವರು ಮೃತಪಟ್ಟಿದ್ದರು. ಸ್ಫೋಟಕ ಸಾಧನಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಭಟ್ ವಿರುದ್ಧ ಪ್ರಾಸಿಕ್ಯೂಷನ್ ಆರೋಪಿಸಿದೆ.
ಸೇನೆಗೆ ಮಾಹಿತಿ ನೀಡುತ್ತಾರೆ ಎಂದು ಜನರನ್ನು ಕೊಲ್ಲುವುದು ಭಯೋತ್ಪಾದಕ ಕೃತ್ಯ. ಆದ್ದರಿಂದ ಅವಧಿಪೂರ್ವ ಬಿಡುಗಡೆ ಮಾಡಬಾರದು ಎಂಬ ನಟರಾಜ್ ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು, ಬಿಡುಗಡೆಗೆ ನಿರಾಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.