ADVERTISEMENT

ಸುಪ್ರೀಂ ಕೋರ್ಟ್‌: ಅನರ್ಹತೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ವಿಶ್ವನಾಥ್ ಅರ್ಜಿ ವಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2021, 9:25 IST
Last Updated 28 ಜನವರಿ 2021, 9:25 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌    

ನವದೆಹಲಿ: ವಿಧಾನ ಪರಿಷತ್‌ ಸದಸ್ಯ (ಎಂಎಲ್‌ಸಿ) ಎ.ಎಚ್‌.ವಿಶ್ವನಾಥ್ ಅವರು ಸಚಿವರಾಗುವುದು ಅಸಾಂವಿಧಾನಿಕ ಎಂದು ಕರ್ನಾಟಕ ಹೈ ಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಗುರುವಾರ ವಜಾಗೊಂಡಿದೆ.

ಸಚಿವ ಸ್ಥಾನಕ್ಕೆ ಸೇರ್ಪಡೆಯಾಗಲು ಅರ್ಹರಲ್ಲ ಎಂದು ಕರ್ನಾಟಕ ಹೈ ಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಜೆಪಿಯ ಎ.ಎಚ್. ವಿಶ್ವನಾಥ್‌ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

‘ವಿಶ್ವನಾಥ್ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿರುವ ಕಾರಣ ಸಂವಿಧಾನದ 164(1–ಬಿ) ಮತ್ತು 361–ಬಿ ಪ್ರಕಾರ ಅನರ್ಹತೆ ಮುಂದುವರಿದಿದೆ. ಕರ್ನಾಟಕ ವಿಧಾನಸಭೆಯ ಅವಧಿ ಮುಗಿಯುವ ತನಕ ಅದು ಇರಲಿದೆ. ಅಷ್ಟರಲ್ಲಿ ಅವರು ಶಾಸಕರಾಗಿ ಚುನಾಯಿತರಾದರೆ ಈ ಅನರ್ಹತೆ ಮುಂದುವರಿಯುವುದಿಲ್ಲ’ ಎಂದು ಹೈಕೋರ್ಟ್‌ ಹೇಳಿತ್ತು.

ADVERTISEMENT

ವಿಶ್ವನಾಥ್ ಅವರು ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್‌ಕುಮಾರ್ ಅವರು ಅನರ್ಹಗೊಳಿಸಿದ 17 ಶಾಸಕರಲ್ಲಿ ವಿಶ್ವನಾಥ್‌ ಕೂಡ ಒಬ್ಬರು. 2019ರ ಡಿಸೆಂಬರ್‌ನಲ್ಲಿ ನಡೆದ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ವಿಶ್ವನಾಥ್ ಸೋಲನುಭವಿಸಿದ್ದರು. ಕಳೆದ ವರ್ಷ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.