ADVERTISEMENT

ನ್ಯಾಯಮೂರ್ತಿ ನಿವಾಸದಲ್ಲಿ ನಗದು | ಆಂತರಿಕ ತನಿಖೆ ಶುರು: ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮಾರ್ಚ್ 2025, 9:32 IST
Last Updated 21 ಮಾರ್ಚ್ 2025, 9:32 IST
   

ನವದೆಹಲಿ: ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎನ್ನಲಾದ ಪ್ರಕರಣವು ನ್ಯಾಯಾಂಗ ವಲಯದಲ್ಲಿ ಕೋಲಾಹಲ ಉಂಟುಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರು ವರ್ಮಾ ವಿರುದ್ಧ ಆಂತರಿಕ ತನಿಖೆ ಆರಂಭಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಪ್ರಸ್ತಾಪಕ್ಕೂ, ಈ ಘಟನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ವರ್ಮಾ ಅವರ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾರಿ ಪ್ರಮಾಣದ ನಗದು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿತ್ತು. ಹಣ ಪತ್ತೆಯಾಗಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಲವರು ನ್ಯಾಯಮೂರ್ತಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ADVERTISEMENT

ಅವರನ್ನು ವರ್ಗಾವಣೆ ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧಾರದ ಬಗ್ಗೆಯೂ ಟೀಕೆಗಳು ಕೇಳಿಬಂದವು. 

ಎಲ್ಲ ರೀತಿಯ ಊಹಾಪೋಹಗಳಿಗೆ ಅಂತ್ಯ ಹಾಡಲು ಶುಕ್ರವಾರ ಸಂಜೆ ಪ್ರಕಟಣೆ ಹೊರಡಿಸಿದ ಸುಪ್ರೀಂ ಕೋರ್ಟ್, ‘ನ್ಯಾಯಮೂರ್ತಿ ಯಶವಂತ್‌ ವರ್ಮಾ ನಿವಾಸದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಮತ್ತು ವದಂತಿಗಳು ಹರಡುತ್ತಿವೆ’ ಎಂದು ಹೇಳಿಕೆ ನೀಡಿದೆ.

ಈ ವಿಷಯ ಚರ್ಚಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆ ಸೇರಿದೆ ಎಂಬುದನ್ನು ಪ್ರಕಟಣೆ ಖಚಿತ ಪಡಿಸಿದ್ದು, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಈ ಸಂಬಂಧ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದೆ.

‘ಉಪಾಧ್ಯಾಯ ಅವರು ಸಾಕ್ಷ್ಯ ಮತ್ತು ಮಾಹಿತಿ ಯನ್ನು ಸಂಗ್ರಹಿಸುವ ಆಂತರಿಕ ತನಿಖಾ ಪ್ರಕ್ರಿಯೆ
ಪ್ರಾರಂಭಿಸಿದ್ದಾರೆ. ಅವರು ನೀಡುವ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಮಾರ್ಚ್‌ 20ರಂದು ಕೊಲಿಜಿಯಂ ಸಭೆ ಸೇರುವ ಮುನ್ನವೇ ಅವರು ತನಿಖೆ ಆರಂಭಿಸಿದ್ದರು ಎಂದು ಹೇಳಲಾಗಿದೆ.

‘ವರ್ಮಾ ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಪ್ರಸ್ತಾವನೆಗೂ ಅವರ ವಿರುದ್ಧದ ಆಂತರಿಕ ತನಿಖೆಗೂ ಸಂಬಂಧ ಇಲ್ಲ. ಮಾತ್ರವಲ್ಲ, ವರದಿ ಯಾದ ಘಟನೆಯು ದೆಹಲಿಯಲ್ಲಿ ನಡೆದಿದೆ’ ಎಂದಿದೆ.

ದೆಹಲಿ ಹೈಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಆಗಿರುವ ವರ್ಮಾ ಅವರು ಮಾರಾಟ ತೆರಿಗೆ, ಜಿಎಸ್‌ಟಿ, ಕಂಪನಿ ಮೇಲ್ಮನವಿಗಳು ಮತ್ತು ಇತರ ಮೇಲ್ಮನವಿಗಳ ವಿಚಾರಣೆ ನಡೆಸುವ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದಾರೆ.

ರಜಾದಲ್ಲಿ ತೆರಳಿರುವ ಕಾರಣ ಅವರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ‘ವರ್ಮಾ ಅವರ ರಜೆಯಲ್ಲಿದ್ದಾರೆ’ ಎಂದು ಅವರ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ವಕೀಲರಿಗೆ ತಿಳಿಸಿದ್ದಾರೆ.‌

ಹಣ ಪತ್ತೆ ಆಗಿಲ್ಲ: ಸ್ಪಷ್ಟನೆ
ಯಶವಂತ್ ವರ್ಮಾ ಅವರ ನಿವಾಸಕ್ಕೆ ಬಿದ್ದಿದ್ದ ಬೆಂಕಿ ನಂದಿಸಲು ತೆರಳಿದ್ದ ಸಿಬ್ಬಂದಿಗೆ ಅಲ್ಲಿ ಯಾವುದೇ ನಗದು ಸಿಕ್ಕಿಲ್ಲ ಎಂದು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಅತುಲ್‌ ಗರ್ಗ್ ಶುಕ್ರವಾರ ಹೇಳಿದ್ದಾರೆ. ‘ವರ್ಮಾ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಮಾರ್ಚ್‌ 14ರ ರಾತ್ರಿ 11.35ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಬೆಂಕಿ ನಂದಿಸಿದ ತಕ್ಷಣ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಿಂದ ಹೊರಟುಹೋದರು. ನಮ್ಮ ತಂಡಕ್ಕೆ ಯಾವುದೇ ನಗದು ಸಿಕ್ಕಿಲ್ಲ’ ಎಂದರು.
ನಗದು ಪತ್ತೆ ಹೇಗೆ?
ಯಶವಂತ್ ವರ್ಮಾ ಅವರ ಮನೆಯಲ್ಲಿ ಮಾರ್ಚ್‌ 14ರಂದು ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಅವರ ಕುಟುಂಬದ ಸದಸ್ಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯಿಂದ ಆಗಿರುವ ಹಾನಿಯನ್ನು ಪರಿಶೀಲಿಸುವಾಗ ಮನೆಯಲ್ಲಿ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆ ಯಾಗಿವೆ ಎನ್ನಲಾಗಿದೆ. ಪತ್ತೆ ಯಾದ ಹಣ ಎಷ್ಟು ಎಂಬುದು ತಿಳಿದಿಲ್ಲ.
2021ರಲ್ಲಿ ನೇಮಕ
ಯಶವಂತ್ ವರ್ಮಾ ಅವರು 2021ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅಲಹಾಬಾದ್‌ನಲ್ಲಿ ಜನಿಸಿದ ಅವರು 1992ರಲ್ಲಿ ವಕೀಲಿಕೆ ಆರಂಭಿಸಿದ್ದರು. 56 ವರ್ಷದ ಅವರು 2014ರ ಅಕ್ಟೋಬರ್‌ನಲ್ಲಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2016ರ ಫೆಬ್ರುವರಿಯಲ್ಲಿ ಅದೇ ಹೈಕೋರ್ಟ್‌ನಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.