
ನವದೆಹಲಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ (ಕರ್ನಾಟಕ), ವಿಜಯ್ ಬಿಷ್ಣೋಯ್ (ಗುವಾಹಟಿ) ಹಾಗೂ ಎ.ಎಸ್.ಚಂದೂರ್ಕರ್ (ಬಾಂಬೆ) ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
ಉನ್ನತ ನ್ಯಾಯಾಲಯದಲ್ಲಿ ಖಾಲಿ ಇರುವ ಮೂರು ಹುದ್ದೆಗಳನ್ನು ಭರ್ತಿ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ಸದಸ್ಯರ ಕೊಲಿಜಿಯಂ ಸೋಮವಾರ ಸಭೆ ಸೇರಿತು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಜೆ.ಕೆ ಮಹೇಶ್ವರಿ ಮತ್ತು ಬಿ.ವಿ ನಾಗರತ್ನ ಅವರು ಕೊಲಿಜಿಯಂನ ಇತರ ಸದಸ್ಯರಾಗಿದ್ದಾರೆ.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಹಾಗೂ ಎ.ಎಸ್.ಓಕಾ ಅವರ ನಿವೃತ್ತಿಯಿಂದ ಈ ಹುದ್ದೆಗಳು ಖಾಲಿ ಆಗಿವೆ. ಸುಪ್ರೀಂ ಕೋರ್ಟ್ಗೆ ಮಂಜೂರಾದ ನ್ಯಾಯಮೂರ್ತಿ ಹುದ್ದೆಗಳು 34. ಈಗ 31 ನ್ಯಾಯಮೂರ್ತಿಗಳಿದ್ದಾರೆ.
ಅಂಜಾರಿಯಾ ಅವರು ಗುಜರಾತ್ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2011ರಲ್ಲಿ ನೇಮಕಗೊಂಡಿದ್ದರು. 2013ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿದ್ದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ 2024ರ ಫೆಬ್ರುವರಿ 25ರಂದು ಅಧಿಕಾರ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.