
ನವದೆಹಲಿ: ‘ನೀಟ್–ಪಿ.ಜಿ’ ಕಟ್ ಆಫ್ ಅನ್ನು ಕಡಿಮೆ ಮಾಡುವುದರಿಂದ ಆಗುವ ಪರಿಣಾಮಗಳ ಕುರಿತು ನ್ಯಾಯಾಲಯ ಕೂಲಂಕಷವಾಗಿ ಅವಲೋಕಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೀಟ್–ಪಿ.ಜಿ ಬರೆಯುವ ಅಭ್ಯರ್ಥಿಗಳು ಈಗಾಗಲೇ ವೈದ್ಯರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದ್ದರೂ, ಕಟ್ ಆಫ್ ಕಡಿತದ ಪರಿಣಾಮಗಳು ಮತ್ತು ಶೈಕ್ಷಣಿಕ ಗುಣಮಟ್ಟದ ಬಗ್ಗೆ ಕಾಳಜಿವಹಿಸಬೇಕಿದೆ ಎಂದು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ನೇತೃತ್ವದ ಪೀಠ ಹೇಳಿದೆ.
‘ಶಿಕ್ಷಣದ ಗುಣಮಟ್ಟಕ್ಕೆ ಪ್ರತಿಕೂಲ ಪರಿಣಾಮ ಬೀರುವಂತಿದ್ದರೆ ಆ ಕುರಿತು ಹೆಚ್ಚು ಮುತುವರ್ಜಿವಹಿಸಬೇಕು. ಕಟ್ ಆಫ್ ಅನ್ನು ತೀವ್ರವಾಗಿ ಕಡಿತಗೊಳಿಸುವುದು, ಅದನ್ನು ಶೂನ್ಯಕ್ಕೆ ಇಳಿಸುವುದರಿಂದ ತೊಂದರೆ ಆಗುವುದಿಲ್ಲ ಎಂಬುದರ ಕುರಿತು ಸರ್ಕಾರವು ಕೋರ್ಟ್ಗೆ ಮನದಟ್ಟು ಮಾಡಿಸಬೇಕು’ ಎಂದು ಪೀಠ ತಿಳಿಸಿದೆ.
ಕೇಂದ್ರದ ಅಫಿಡವಿಟ್ನಲ್ಲಿ ಏನಿದೆ:
ತನ್ನ ಕ್ರಮವನ್ನು ಸಮರ್ಥಿಸಿಕೊಂಡು ಕೇಂದ್ರ ಸರ್ಕಾರ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ನೀಟ್–ಪಿ.ಜಿಯ ಉದ್ದೇಶವು ಅಭ್ಯರ್ಥಿಗಳ ಎಂಬಿಬಿಎಸ್ ಪದವಿ ಅರ್ಹತೆಯನ್ನು ಪ್ರಮಾಣೀಕರಿಸುವುದಲ್ಲ, ಬದಲಿಗೆ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ನ ಸೀಟುಗಳ ಹಂಚಿಕೆಗಾಗಿ ಮೆರಿಟ್ ಪಟ್ಟಿ ರಚಿಸುವುದಾಗಿದೆ ಎಂದು ಕೇಂದ್ರ ತಿಳಿಸಿದೆ.
‘ಪರ್ಸೈಂಟೈಲ್ ಕಡಿತಗೊಳಿಸಿದ ಬಳಿಕವೂ ಸೀಟು ಹಂಚಿಕೆಯು ಅರ್ಹತೆ ಮತ್ತು ಅಭ್ಯರ್ಥಿಗಳ ಆದ್ಯತೆಗಳನ್ನು ಅನುಸರಿಸಿಯೇ ನಡೆಯುತ್ತದೆ. ಹೀಗಾಗಿ ಈ ಕ್ರಮವು ಶೈಕ್ಷಣಿಕ ಮಾನದಂಡಗಳ ಜತೆ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಅದು ಪ್ರತಿಪಾದಿಸಿದೆ.
‘ನೀಟ್–ಪಿ.ಜಿ ಆರಂಭವಾದ 2017ರಿಂದಲೇ ಸೀಟು ಉಳಿಯುವುದನ್ನು ತಡೆಯಲು ಸೂಕ್ತ ಸಂದರ್ಭಗಳಲ್ಲಿ ಕಟ್–ಆಫ್ ಕಡಿತಗೊಳಿಸುವುದನ್ನು ಜಾರಿಗೆ ತರಲಾಗಿದೆ. 2023ರ ಶೈಕ್ಷಣಿಕ ಸಾಲಿನಲ್ಲೂ ಅರ್ಹತಾ ಪರ್ಸೈಂಟೈಲ್ ಅನ್ನು ಕಡಿತಗೊಳಿಸಿ ಶೂನ್ಯಕ್ಕೆ ಇಳಿಸಲಾಗಿತ್ತು. ಹೀಗಾಗಿ ಈ ಬಾರಿಯ ನಿರ್ಧಾರವು ಜಾರಿಯಲ್ಲಿರುವ ನೀತಿ ಮತ್ತು ಆಡಳಿತಾತ್ಮಕ ಅಭ್ಯಾಸಕ್ಕೆ ಅನುಗುಣವಾಗಿದೆ’ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
‘ದೇಶದ ಆರೋಗ್ಯ ಸೇವೆಗೆ ಪ್ರವೇಶವನ್ನು ವಿಸ್ತರಿಸುವ ಮತ್ತು ವೈದ್ಯಕೀಯ ಮೂಲಸೌಕರ್ಯ ಬಲಪಡಿಸುವ ಮಹತ್ವದ ಉದ್ದೇಶವನ್ನು ಈ ನೀತಿ ಹೊಂದಿದೆ’ ಎಂದು ಅದು ಹೇಳಿದೆ.
ನೀಟ್–ಪಿ.ಜಿ ಬರೆಯುವ ಅಭ್ಯರ್ಥಿಗಳು ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದು, ಆಧುನಿಕ ವೈದ್ಯಕೀಯ ಕುರಿತು ನಾಲ್ಕೂವರೆ ವರ್ಷಗಳವರೆಗೆ ಕಠಿಣ ತರಬೇತಿ ಪಡೆದು ಯಶಸ್ವಿಯಾಗಿರುತ್ತಾರೆ. ಬಳಿಕ ಒಂದು ವರ್ಷ ಕಡ್ಡಾಯ ಇಂಟರ್ನ್ಶಿಪ್ ಅವಧಿ ಪೂರೈಸಿರುತ್ತಾರೆ. ಹೀಗಾಗಿ ಈ ಅಭ್ಯರ್ಥಿಗಳು ಕಾನೂನುಬದ್ಧವಾಗಿ ಅರ್ಹ ವೈದ್ಯಕೀಯ ಪದವೀಧರರಾಗಿರುತ್ತಾರೆ. ನಕಾರಾತ್ಮಕ ಅಂಕಗಳ ಅನ್ವಯ ಕೆಲ ಅಭ್ಯರ್ಥಿಗಳು ಕಡಿಮೆ ಅಥವಾ ಶೂನ್ಯ ಅಥವಾ ಮೈನಸ್ ಅಂಕಗಳನ್ನು ಪಡೆಯಬಹುದು. ಆದರೆ ಇದನ್ನು ಕ್ಲಿನಿಕಲ್ ಅಸಮರ್ಥತೆ ಎಂದು ನಿರ್ಣಯಿಸಲಾಗದು ಎಂದು ಸರ್ಕಾರ ಹೇಳಿದೆ.
2025–26ರ ನೀಟ್–ಪಿಜಿ ಮೂರನೇ ಸುತ್ತಿನ ಕೌನ್ಸೆಲಿಂಗ್ನ ಕನಿಷ್ಠ ಅರ್ಹತಾ ಕಟ್ ಆಫ್ ಅನ್ನು ಜನವರಿ 13ರಂದು ಕಡಿತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಹರಿಶರಣ್ ದೇವಗನ್ ಮತ್ತು ಇತರರು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಮೀಸಲು ಪ್ರವರ್ಗದ ಅಭ್ಯರ್ಥಿಗಳ ಅರ್ಹತಾ ಪರ್ಸೈಂಟಲ್ ಅನ್ನು ಶೂನ್ಯಕ್ಕೆ ಇಳಿಸಿದ ನಿರ್ಧಾರವನ್ನು ಪ್ರಶ್ನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.