
ನವದೆಹಲಿ: ‘ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ವಿರುದ್ಧ ಸಲ್ಲಿಸಿರುವ ವಿಡಿಯೊಗಳಲ್ಲಿರುವ ಸಂಭಾಷಣೆಯ ಅನುವಾದದಲ್ಲಿ ನಿಖರತೆ ಇಲ್ಲ. ಕೃತಕ ಬುದ್ಧಿಮತ್ತೆಯ (ಎ.ಐ) ಯುಗದಲ್ಲಿ ಅನುವಾದ ನಿಖರವಾಗಿರಬೇಕು’ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ ಹೇಳಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ವಾಂಗ್ಚೂಕ್ ಹೇಳಿದ್ದಾರೆ ಎನ್ನಲಾದ ಮಾತುಗಳನ್ನು ಅವರು ಆಡಿಲ್ಲ’ ಎಂದು ವಾದಿಸಿದರು. ಇದನ್ನು ಆಲಿಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರ ಪೀಠವು, ವಾಂಗ್ಚೂಕ್ ಅವರು ನೀಡಿದ ಹೇಳಿಕೆಗಳ ನಿಜವಾದ ಪ್ರತಿಗಳನ್ನು ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚಿಸಿತು.
‘ಮಿಸ್ಟರ್ ಸಾಲಿಸಿಟರ್, ನಮಗೆ ವಾಂಗ್ಚೂಕ್ ಭಾಷಣದ ನಿಜವಾದ ಪ್ರತಿ ಬೇಕು. ಅವರು ಮಾತನಾಡಿರುವುದಕ್ಕೂ ಮತ್ತು ನೀವು ಹೇಳುತ್ತಿರುವುದಕ್ಕೂ ವ್ಯತ್ಯಾಸವಿದೆ. ಅವರು ಏನು ಹೇಳಿದ್ದಾರೋ ಅದರ ನಿಖರವಾದ ಪ್ರತಿ ಬೇಕು’ ಎಂದು ಹೇಳಿದೆ.
‘ವಾಂಗ್ಚೂಕ್ ಏನೇ ಹೇಳಿದರೂ, ಅದರ ನಿಜವಾದ ಅನುವಾದ ಇರಬೇಕು. ನಿಮ್ಮ ಅನುವಾದ 7ರಿಂದ 8 ನಿಮಿಷಗಳಷ್ಟಿದೆ. ಆದರೆ, ಭಾಷಣ 3 ನಿಮಿಷಗಳಷ್ಟಿದೆ. ನಾವು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದು, ಅನುವಾದದ ನಿಖರತೆ ಕನಿಷ್ಠ ಶೇ 98ರಷ್ಟು ಇದೆ’ ಎಂದು ಪೀಠ ಹೇಳಿದೆ.
ಅನುವಾದದ ಬಗ್ಗೆ ಪ್ರಶ್ನಿಸಿದ ಕಪಿಲ್ ಸಿಬಲ್, ‘ವಾಂಗ್ಚೂಕ್ ಅವರು ತಮ್ಮ ಮುಷ್ಕರ ಮುಂದುವರಿಸಿದರು. ನೇಪಾಳದ ಉಲ್ಲೇಖ ಮಾಡುವ ಮೂಲಕ ಯುವಕರನ್ನು ಪ್ರಚೋದಿಸುವುದನ್ನು ಮುಂದುವರಿಸಿದರು’ ಎಂಬ ವಾಕ್ಯಗಳಿವೆ. ಈ ಸಾಲುಗಳು ಎಲ್ಲಿಂದ ಬಂದವು? ಇದು ಬಹಳ ವಿಚಿತ್ರವಾದ ಬಂಧನದ ಆದೇಶವಾಗಿದೆ’ ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಂ. ನಟರಾಜ್, ‘ಅನುವಾದ ಮಾಡಲು ಬೇರೆ ಇಲಾಖೆ ಇದೆ. ನಾವು ಅದರಲ್ಲಿ ಪರಿಣತರಲ್ಲ’ ಎಂದು ಸಮರ್ಥನೆ ನೀಡಿದ್ದಾರೆ.
ಪ್ರಕರಣದ ವಿಚಾರಣೆ ಗುರುವಾರ ಮತ್ತೆ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.