
ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 31 ವರ್ಷದ ತನ್ನ ಮಗನಿಗೆ ದಯಾಮರಣಕ್ಕೆ ಕೋರಿ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅಂತ್ಯಗೊಳಿಸಿರುವ ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪು ಕಾಯ್ದಿರಿಸಿತು.
ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ತಲೆಗೆ ಪೆಟ್ಟಾಗಿ ಹರೀಶ್ ರಾಣಾ ಅವರು ಕೋಮಾಗೆ ಹೋಗಿದ್ದರು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿತ್ತು.
ಇದೇ ಜನವರಿ 13ರಂದು ನ್ಯಾಯಮೂರ್ತಿಗಳು ಖುದ್ದಾಗಿ ಯುವಕನ ಕುಟುಂಬವನ್ನು ಭೇಟಿ ಮಾಡಿತ್ತು. ಈ ವೇಳೆ ‘ಅವನು ಅನುಭವಿಸಿದ್ದು ಸಾಕು. ಇನ್ನಷ್ಟು ಅನುಭವಿಸುವುದು ನಮಗೆ ಇಷ್ಟವಿಲ್ಲ’ ಎಂದು ಕುಟುಂಬವು ತಿಳಿಸಿದ್ದರು. ‘ಕುಟುಂಬದ ಸ್ಥಿರವಾದ ಮತ್ತು ಎಲ್ಲ ರೀತಿಯಿಂದಲೂ ಯೋಚಿಸಿ ತೆಗೆದುಕೊಳ್ಳುವ ನಿರ್ಧಾರವೇ ಬಹಳ ಮುಖ್ಯವಾಗುತ್ತದೆ’ ಎಂದು ಪೀಠವು ವಿಚಾರಣೆ ವೇಳೆ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.