
ಇ.ವಿ.ಕೆ.ಎಸ್. ಇಳಂಗೋವನ್
–ಪಿಟಿಐ ಚಿತ್ರ
ಚೆನ್ನೈ: ‘ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಉತ್ತಮ ತೀರ್ಪನ್ನೇ ನೀಡಿದೆ. ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ತೀರ್ಪು ಉಪಯುಕ್ತವಾಗಲಿದೆ’ ಎಂದು ಡಿಎಂಕೆ ಗುರುವಾರ ಹೇಳಿದೆ.
‘ತಮಿಳುನಾಡು ವಿಧಾನಸಭೆಯು ಅಂಗೀಕರಿಸಿದ ಮಸೂದೆ/ನಿರ್ಣಯವನ್ನು ರಾಜ್ಯಪಾಲರು ಒಪ್ಪಬೇಕು’ ಎಂದು ಪಕ್ಷದ ಹಿರಿಯ ನಾಯಕ ಟಿ.ಕೆ.ಎಸ್.ಇಳಂಗೋವನ್ ಹೇಳಿದರು. ‘ವಿಧಾನಸಭೆ ಅಂಗೀಕರಿಸಿದ ಮಸೂದೆಯಲ್ಲಿ ಸಂವಿಧಾನಕ್ಕೆ ವಿರುದ್ಧವಾದ ಅಂಶಗಳಿವೆ ಎಂದು ರಾಜ್ಯಪಾಲರು ಗುರುತಿಸಿದಲ್ಲಿ ಆ ಕುರಿತು ಅವರು ಸ್ಪಷ್ಟನೆ ಪಡೆಯಬೇಕು’ ಎಂದರು.
‘ರಾಜ್ಯಪಾಲರು ಯಾವುದೇ ಮಸೂದೆಯನ್ನು ತಿರಸ್ಕರಿಸುವಂತಿಲ್ಲ ಅಥವಾ ಈ ಮಸೂದೆಯನ್ನು ಅಂಗೀಕರಿಸಬಾರದು ಎಂದು ಹೇಳುವ ಹಾಗಿಲ್ಲ. ಅವರಿಗೆ ಇಂಥ ಅಧಿಕಾರವೇ ಇಲ್ಲ’ ಎಂದು ಅವರು ಪಿಟಿಐ ವಿಡಿಯೊಗೆ ತಿಳಿಸಿದರು.
‘ಶಾಸಕರು ಹಾಗೂ ಸಂಸದರೇ ರಾಷ್ಟ್ರಪತಿ ಅವರನ್ನು ಆಯ್ಕೆ ಮಾಡುತ್ತಾರೆ. ಉಪ ರಾಷ್ಟ್ರಪತಿಯನ್ನೂ ಸಂಸದರು ಆಯ್ಕೆ ಮಾಡುತ್ತಾರೆ. ಪ್ರಧಾನಿ ಕೂಡ ಚುನಾಯಿಸಲ್ಪಟ್ಟವರು. ಆದರೆ ರಾಜ್ಯಪಾಲರನ್ನು ನೇಮಕ ಮಾಡಲಾಗುತ್ತದೆ. ಹೀಗಾಗಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯು ಸಂವಿಧಾನದಲ್ಲಿನ ಅವಕಾಶಗಳಿಗೆ ಅನುಗುಣವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದಷ್ಟೇ ರಾಜ್ಯಪಾಲರ ಕೆಲಸ’ ಎಂದು ಹೇಳಿದರು.
‘ರಾಜ್ಯಪಾಲರು ಮಸೂದೆಗೆ ಸಂಬಂಧಿಸಿ ಸ್ಪಷ್ಟನೆಯನ್ನು ಕೇಳಬಹುದಷ್ಟೆ. ಅದನ್ನು ತಿರಸ್ಕರಿಸುವಂತಿಲ್ಲ. ಒಂದು ವೇಳೆ ಸರ್ಕಾರವು ಸ್ಪಷ್ಟನೆ ನೀಡಿದಲ್ಲಿ ಅವರು ಅದನ್ನು ಒಪ್ಪಿಕೊಳ್ಳಬೇಕು. ಆದರೆ ಈ ರಾಜ್ಯಪಾಲರು ಮೊಂಡು’ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕುರಿತು ಪರೋಕ್ಷವಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.