ADVERTISEMENT

ದಾಖಲೆ ಇಲ್ಲ ಎಂಬ ಕಾರಣಕ್ಕೆ ವಹಿವಾಟು ನಡೆದೇ ಇಲ್ಲ ಎನ್ನಲಾಗದು: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 15:42 IST
Last Updated 5 ಸೆಪ್ಟೆಂಬರ್ 2025, 15:42 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಚೆಕ್‌, ಬ್ಯಾಂಕ್‌ ವರ್ಗಾವಣೆ ದಾಖಲೆ ಅಥವಾ ರಶೀದಿ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

‘ಹಣದ ವಹಿವಾಟು ಎಂದಮೇಲೆ ಅದರಲ್ಲಿ ನಗದು ಕೂಡ ಇರಬಹುದು. ಅದು ಅಸಹಜವೇನೂ ಅಲ್ಲ’ ಎಂದು ಕೋರ್ಟ್‌ ತಿಳಿಸಿದೆ. 

ವ್ಯಕ್ತಿಯೊಬ್ಬರು ಅಧಿಕೃತ ವಿಧಾನಗಳ ಮೂಲಕ (ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್‌ ಅಥವಾ ಬ್ಯಾಂಕ್‌ ವಹಿವಾಟು) ಹಣ ವರ್ಗಾವಣೆಯನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅಂತಹ ಮೊತ್ತವನ್ನು ನಗದು ಮೂಲಕ ಪಾವತಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅದರಲ್ಲೂ ಸಾಲ ಮರುಪಾವತಿ ಕುರಿತು ಸ್ಪಷ್ಟವಾಗಿ ವಚನಪತ್ರ ಇದ್ದಲ್ಲಿ ಹಾಗೆ ನಿರ್ಧರಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ವಿಪುಲ್‌.ಎಂ ಪಾಂಚೋಲಿ ಅವರ ಪೀಠ ಹೇಳಿದೆ.

ADVERTISEMENT

ಸಾಮಾನ್ಯವಾಗಿ ನಗದು ವಹಿವಾಟಿಗೆ ದಾಖಲೆ ಪುರಾವೆಗಳು ಇರುವುದಿಲ್ಲ ಎಂಬುದನ್ನು ಗಮನಿಸಬೇಕು ಎಂದ ಪೀಠವು, ‘ಕೆಲ ಸಂದರ್ಭಗಳಲ್ಲಿ ನಗದು ವಹಿವಾಟಿಗೆ ರಶೀದಿ ತೆಗೆದುಕೊಳ್ಳವ ಸಂದರ್ಭ ಬರಬಹುದು. ಆದರೆ, ಆ ರೀತಿಯ ರಶೀದಿ ಇಲ್ಲ ಎಂಬ ಮಾತ್ರಕ್ಕೆ ಇಬ್ಬರ ನಡುವೆ ನಗದು ವಹಿವಾಟು ನಡೆದಿಲ್ಲ ಎಂದು ಅರ್ಥೈಸಲು ಆಗುವುದಿಲ್ಲ’ ಎಂದು ಪೀಠ ತಿಳಿಸಿದೆ.

ಈ ಕುರಿತು ಜಿಯೋರಿಗೆಕುಟ್ಟಿ ಚಾಕೊ ಎಂಬುವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಪೀಠ ಅನುಮತಿ ನೀಡಿತು.

ತನಗೆ ವ್ಯಕ್ತಿಯೊಬ್ಬರು ₹35,29,680 ಪಾವತಿಸಬೇಕಿದೆ. ಇಷ್ಟು ಹಣವನ್ನು ಪಾವತಿಸುವಂತೆ ವಿಚಾರಣಾ ನ್ಯಾಯಾಲಯವು ಸಾಲ ಪಡೆದ ವ್ಯಕ್ತಿಗೆ ಆದೇಶಿಸಿತ್ತು. ಆದರೆ ಹೈಕೋರ್ಟ್‌ ಈ ಮೊತ್ತವನ್ನು ₹22,00,000ಕ್ಕೆ ಇಳಿಸಿದೆ ಎಂದು ಅರ್ಜಿದಾರರು ಮೇಲ್ಮನವಿಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.