ನವದೆಹಲಿ: ‘ಹೆಲ್ಪರ್’ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ವಿಮಾ ರಕ್ಷಣೆಯನ್ನು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ತೀರ್ಪು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಬದಿಗಿರಿಸಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ‘ಹೆಲ್ಪರ್’ ಮತ್ತು ‘ಕ್ಲೀನರ್’ ಕರ್ತವ್ಯಗಳ ಬಗ್ಗೆ ಸ್ಪಷ್ಟವಾದ ಗಡಿರೇಖೆಯಿಲ್ಲ ಎಂದು ಹೇಳಿದೆ.
ಪ್ರಕರಣದ ವಿವರ: ಕೊಳವೆ ಬಾವಿ ಕೊರೆಯುವ ವಾಹನದಲ್ಲಿ ‘ಹೆಲ್ಪರ್’ ಆಗಿದ್ದ ತೇಜ್ ಸಿಂಗ್ ಎಂಬುವವರು, ಬಾವಿಯ ಮಣ್ಣಿನ ಕುಸಿತದ ಸಂದರ್ಭದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ದಾಖಲಾದ ಅರ್ಜಿಯ ವಿಚಾರಣೆ ನಡೆಸಿದ ಕಾರ್ಮಿಕರ ಆಯುಕ್ತರು, ₹3,27,555 ಪರಿಹಾರ ಹಾಗೂ ಅಂತ್ಯ ಸಂಸ್ಕಾರದ ವೆಚ್ಚವಾಗಿ ₹2,500 ಪಾವತಿಸುವಂತೆ ಆದೇಶಿಸಿದರು. ಅಪಘಾತದ ದಿನಾಂಕದಿಂದ ಶೇ 18ರಷ್ಟು ಬಡ್ಡಿಯನ್ನುಮೃತರ ಕಾನೂನುಬದ್ಧ ವಾರಸುದಾರರಿಗೆ ನೀಡುವಂತೆ ಆದೇಶಿಸಲಾಗಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ ವಿಮಾ ಕಂಪನಿಯು ಅಪಘಾತದಲ್ಲಿ ಮೃತಪಟ್ಟವರು ‘ಹೆಲ್ಪರ್’ ಆಗಿದ್ದಾರೆ, ಆದರೆ ವಿಮಾ ರಕ್ಷಣೆ ಇರುವುದು ‘ಕ್ಲೀನರ್’ಗೆ ಎಂದು ವಾದಿಸಿತ್ತು. ಕಂಪನಿಯ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.