ಶ್ರೀನಗರ: ‘ಯಾವುದೇ ಪರಿಣಾಮವನ್ನು ಎದುರಿಸುವುದಿಲ್ಲ ಎಂಬ ವಿಶ್ವಾಸದಿಂದಲೇ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಆತ(ವಕೀಲ ರಾಕೇಶ್ ಕಿಶೋರ್) ಶೂ ಎಸೆದಿದ್ದಾನೆ’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮಂಗಳವಾರ ಹೇಳಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಶೂ ಎಸೆದ ಪ್ರಕರಣ 2047ರ ವೇಳೆಗೆ ಬಿಜೆಪಿಯ ವಿಕಸಿತ ಭಾರತ ಹೇಗಿರುತ್ತದೆ ಎಂಬುದರ ಭಯಾನಕ ಚಿತ್ರಣವನ್ನು ನೀಡುತ್ತದೆ. ತನ್ನ ಶೋಚನೀಯ ಕೃತ್ಯಕ್ಕೆ ಯಾವುದೇ ಶಿಕ್ಷೆ ಸಿಗುವುದಿಲ್ಲ ಎಂದು ಚೆನ್ನಾಗಿ ತಿಳಿದಿದ್ದರಿಂದಲೇ ಆತ(ವಕೀಲ) ಅಷ್ಟು ಧೈರ್ಯದಿಂದ ಕೃತ್ಯ ಎಸೆಗಿದ್ದಾನೆ’ ಎಂದು ಹೇಳಿದ್ದಾರೆ.
‘ಗೋಡ್ಸೆ ಭಾರತದಲ್ಲಿ ಗುಂಪು ಹಲ್ಲೆ ನಡೆಸುವವರಿಗೆ ಹಾರ ಹಾಕುವುದು, ಆತ್ಯಾಚಾರಿಗಳನ್ನು ಕ್ಷಮಿಸುವುದು ಮತ್ತು ದ್ವೇಷ ಹರಡುವವರನ್ನು ಸನ್ಮಾನಿಸುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ವರ್ಷಾನುಗಟ್ಟಲೇ ಜೈಲುವಾಸ ಅನುಭವಿಸಲು ಆತ(ವಕೀಲ) ಉಮರ್ ಖಾಲಿದ್ ಅಥವಾ ಶಾರ್ಜೀಲ್ ಇಮಾಮ್ ಅಲ್ಲವಲ್ಲ’ ಎಂದು ಪರೋಕ್ಷವಾಗಿ ಕಟುಕಿದ್ದಾರೆ.
‘ಈಗ ನ್ಯಾಯಾಲಯದ ಮುಂದಿರುವ ಪ್ರಶ್ನೆ ಕೇವಲ ಕಾನೂನಿಗೆ ಸಂಬಂಧಪಟ್ಟಿದ್ದಲ್ಲ. ಅದು ಅಸ್ತಿತ್ವದ ಪ್ರಶ್ನೆಯಾಗಿದೆ. ಸಂವಿಧಾನವನ್ನು ರಕ್ಷಿಸಲು ನ್ಯಾಯಾಂಗವು ಎದ್ದು ನಿಲ್ಲುತ್ತದೆಯೇ ಅಥವಾ ಅದನ್ನು ಶೂ ಅಡಿಯಲ್ಲಿ ಹಾಕಿ ತುಳಿಯಲಾಗುತ್ತಿರುವಾಗ ಮೌನವಾಗಿರುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ವಕೀಲ ರಾಕೇಶ್ ಕಿಶೋರ್ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಪೀಠದ ಬಳಿ ಬಂದು ಶೂ ತೆಗೆದು ಸಿಜೆಐ ಗವಾಯಿ ಅವರ ಮೇಲೆ ಎಸೆಯಲು ಪ್ರಯತ್ನಿಸಿದ್ದರು. ತಕ್ಷಣ ಕೃತ್ಯವನ್ನು ತಡೆದ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ಹಾಕಿದ್ದರು.
ಈ ವೇಳೆ ಶಾಂತಚಿತ್ತರಾಗಿದ್ದ ಸಿಜೆಐ ಗವಾಯಿ ಅವರು ವಿಚಾರಣೆಯನ್ನು ಮುಂದುವರಿಸುವಂತೆ ಇತರ ವಕೀಲರಿಗೆ ತಿಳಿಸಿದ್ದರು. ಇಂತಹ ಘಟನೆಗಳಿಂದ ವಿಚಲಿತರಾಗುವುದಿಲ್ಲ ಎಂದೂ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.