ADVERTISEMENT

ನವ ಕೇರಳ ನಾಗರಿಕ ಪ್ರತಿಕ್ರಿಯೆ ಕಾರ್ಯಕ್ರಮ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಪಿಟಿಐ
Published 24 ಫೆಬ್ರುವರಿ 2026, 14:15 IST
Last Updated 24 ಫೆಬ್ರುವರಿ 2026, 14:15 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಸರ್ಕಾರದ ಕಾರ್ಯಕ್ರಮಗಳ ಕುರಿತು ಜಾಗೃತಿ ಹಾಗೂ ಜನಾಭಿಪ್ರಾಯ ಪಡೆಯಲು ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ನಡೆಸಲು ಉದ್ದೇಶಿಸಿದ್ದ ‘ನವ ಕೇರಳ ನಾಗರಿಕ ಪ್ರತಿಕ್ರಿಯೆ ಕಾರ್ಯಕ್ರಮ’ಕ್ಕೆ ತಡೆ ನೀಡಿ ಕೇರಳ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.  

‘ಯೋಜನೆಯಲ್ಲಿ ಏನು ತಪ್ಪಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರಿದ್ದ ಪೀಠ ಪ್ರಶ್ನಿಸಿದೆ.

ADVERTISEMENT

‘ರಾಜ್ಯ ಸರ್ಕಾರವು ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ, ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಸಹಜವಾಗಿ, ಈ ಯೋಜನೆಗಳು ತಳಮಟ್ಟದಲ್ಲಿ ಸರಿಯಾಗಿ ಜಾರಿಯಾಗುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯಮಾಪನ ಮಾಡಲು ಸರ್ಕಾರ ಹೊರಟಿದೆ’ ಎಂದು ನ್ಯಾಯಾಲಯವು ತಿಳಿಸಿದೆ.

‘ಏಪ್ರಿಲ್‌ 10ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. 2025ರ ಅಕ್ಟೋಬರ್‌ 10ರಂದೇ ಸರ್ಕಾರವು ಯೋಜನೆಯನ್ನು ಪ್ರಕಟಿಸಿದೆ. ಸೆ.23ರಂದೇ ಪತ್ರ ಬರೆದಿರುವ ಎಲ್‌ಡಿಎಫ್‌ ಕಾರ್ಯದರ್ಶಿ, ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಲು ಸ್ವಯಂಸೇವಕರಾಗಿ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ಪತ್ರ ಬರೆದಿದ್ದರು. ಹೀಗಾಗಿ ಈ ಕಾರ್ಯಕ್ರಮಕ್ಕೆ ಹೈಕೋರ್ಟ್‌ ನೀಡಿದ ತಡೆಯಾಜ್ಞೆಯನ್ನು ಮುಂದುವರಿಸಬೇಕು’ ಎಂದು ವಕೀಲರು ಕೋರಿದರು.

ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಪಕ್ಷದ ಸ್ವಯಂಸೇವಕರು ಸ್ವಪ್ರೇರಣೆಯಿಂದ ಸರ್ಕಾರದ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಲು ಮುಂದಾಗಿದ್ದಾರೆ. ಇದಕ್ಕೆ ಯಾವುದೇ ನಯಾಪೈಸೆ ಹಣ ಪಾವತಿಸುತ್ತಿಲ್ಲ. ಯಾರೂ ಬೇಕಾದರೂ ಕೂಡ ಭಾಗಿಯಾಗಬಹುದು. ಹೀಗಾಗಿ, ನ್ಯಾಯಾಲಯವು ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿ ವಕೀಲ, ‘ಹೇಳಿಕೆ ನೀಡಿರುವುದು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿಯೇ ಹೊರತು ಸ್ಥಳೀಯ ನಾಯಕರಲ್ಲ. ಸರ್ಕಾರದ ಖರ್ಚಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಈ ಉದ್ದೇಶಕ್ಕಾಗಿಯೇ ಸರ್ಕಾರವು ₹23 ಕೋಟಿ ಅನುದಾನ ಮಂಜೂರು ಮಾಡಿದೆ’ ಎಂದು ನ್ಯಾಯಾಲಯದ ಗಮನಸೆಳೆದರು.

‘ಚುನಾವಣೆಯ ಹೊಸ್ತಿಲಲ್ಲಿ ಸಾರ್ವಜನಿಕ ಹಣದಲ್ಲಿ ಪ್ರಚಾರ ಯೋಜನೆಯನ್ನು ಹಮ್ಮಿಕೊಂಡಿದೆ’ ಎಂದು ಒತ್ತಿ ಹೇಳಿದರು.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ಫೆಬ್ರುವರಿ 17ರಂದು ಕೇರಳ ಹೈಕೋರ್ಟ್‌ ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲಾಗಿದೆ. ರಾಜ್ಯ ಸರ್ಕಾರವು ಸೂಕ್ತ ಹಂತದಲ್ಲಿ ಖರ್ಚಿನ ವರದಿಯನ್ನು ಸಲ್ಲಿಸಬಹುದು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.