ADVERTISEMENT

ಬೀದಿ ನಾಯಿಗಳನ್ನು ನಿಗದಿಪಡಿಸಿದ ಆಶ್ರಯತಾಣಗಳಿಗೆ ಸ್ಥಳಾಂತರಿಸಿ: SC ನಿರ್ದೇಶನ

ಪಿಟಿಐ
Published 7 ನವೆಂಬರ್ 2025, 6:42 IST
Last Updated 7 ನವೆಂಬರ್ 2025, 6:42 IST
   

ನವದೆಹಲಿ: ಬೀದಿನಾಯಿ ಕಡಿತ ಪ್ರಕರಣಗಳು ಏರಿಕೆ ಆಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌, ಆಸ್ಪತ್ರೆ, ಶಾಲೆ, ಬಸ್‌, ರೈಲು ನಿಲ್ದಾಣ, ಕ್ರೀಡಾ ಸಂಕೀರ್ಣಗಳಿಂದ ಅವುಗಳನ್ನು ಕೂಡಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಶುಕ್ರವಾರ ಆದೇಶ ನೀಡಿದೆ.

ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳಲ್ಲಿನ ಬೀಡಾಡಿ ದನಗಳನ್ನು ಆದಷ್ಟು ಬೇಗ ತೆರವುಗೊಳಿಸಲು ಕೂಡ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಹಾಗೂ ಎನ್‌.ವಿ.ಅಂಜಾರಿಯಾ ಅವರ ವಿಶೇಷ ನ್ಯಾಯಪೀಠವು ಬೀದಿನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶನಗಳನ್ನು ನೀಡಿದೆ. 

ADVERTISEMENT

‘ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಸ್ಥೆ, ಬಸ್‌, ರೈಲು ನಿಲ್ದಾಣಗಳಲ್ಲಿ ಬೀದಿನಾಯಿಗಳ ಕಡಿತದ ಪ್ರಕರಣ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯ ದೃಷ್ಟಿಯಿಂದ ಎರಡು ವಾರಗಳ ಒಳಗಾಗಿ ಇಂತಹ ಸಂಸ್ಥೆಗಳನ್ನು ಗುರುತಿಸುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪೂರ್ಣಗೊಳಿಸಬೇಕು’ ಎಂದು ಸೂಚಿಸಿದೆ.

‘ಬೀದಿನಾಯಿಗಳು ಇಂತಹ ಸಂಸ್ಥೆಗಳ ಆವರಣದೊಳಗೆ ಪ್ರವೇಶಿಸದಂತೆ ತಡೆಯಲು ಎಲ್ಲ ಸಂಸ್ಥೆಗಳು ಬೇಲಿ, ತಡೆಗೋಡೆ, ಪ್ರವೇಶದ್ವಾರ ಗಳನ್ನು ಅಳವಡಿಸಿಕೊಂಡಿವೆಯೇ ಎಂಬುದನ್ನು ಸಂಸ್ಥೆಯ ಮುಖ್ಯಸ್ಥರು ಎಂಟು ವಾರದೊಳಗೆ ಖಾತರಿಪಡಿಸಿಕೊಳ್ಳಬೇಕು’ ಎಂದು ತಿಳಿಸಿದೆ.

‘ಸಂಸ್ಥೆಯ ಆವರಣದೊಳಗೆ ಬೀದಿನಾಯಿಗಳು ಪ್ರವೇಶಿಸದಂತೆ ತಡೆದು, ಸ್ವಚ್ಛತೆ ಕಾಪಾಡಲು ಅನುಕೂಲ ವಾಗುವಂತೆ ನಿರ್ದಿಷ್ಟ ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು. ಗೊತ್ತುಪಡಿಸಿದ ಅಧಿಕಾರಿಯ ಹೆಸರನ್ನು ಸಂಸ್ಥೆಯ ಪ್ರವೇಶ ದ್ವಾರದಲ್ಲಿಯೇ ಶಾಶ್ವತವಾಗಿ ನಮೂದಿಸುವಂತೆ ಸೂಚಿಸಬೇಕು’ ಎಂದು ಸ್ಥಳೀಯ ಆಡಳಿತ ಸಂಸ್ಥೆ ಹಾಗೂ ಪ್ರಾಧಿಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಇದಲ್ಲದೇ, ಸ್ಥಳೀಯ ಸಂಸ್ಥೆ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಇಡೀ ಆವರಣದ ಒಳಭಾಗದಲ್ಲಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಿ, ಸಂಸ್ಥೆಗಳ ಆವರಣವು ಬೀದಿನಾಯಿಗಳಿಂದ ಮುಕ್ತಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದೂ ಹೇಳಿದೆ.

‘ಸಂಸ್ಥೆಗಳ ಆವರಣಗಳಲ್ಲಿ ಕಂಡುಬರುವ ಬೀದಿನಾಯಿಗಳನ್ನು ಪ್ರಾಣಿಗಳ ಜನನ ನಿಯಂತ್ರಣ ನಿಯಮದಂತೆ ಸೆರೆಹಿಡಿದು, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಅವುಗಳಿಗೆ ಸೂಕ್ತ ಲಸಿಕೆ ಹಾಕಿದ ನಂತರ ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳು ವುದು ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಬೀದಿ ನಾಯಿಗಳನ್ನು ಸೆರೆ ಹಿಡಿದ ಜಾಗಕ್ಕೆ ಮರಳಿ ಬಿಡಬಾರದು’ ಎಂದು ತಾಕೀತು ಮಾಡಿದೆ. 

ಬೀದಿನಾಯಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ಜುಲೈ 28ರಂದು ದಾಖಲಿಸಿ ಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

ಬೀಡಾಡಿ ದನಗಳ ಸ್ಥಳಾಂತರಕ್ಕೂ ಸೂಚನೆ

‘ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಒಳಪಡುವ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇಗಳಲ್ಲಿ ಕಾಣಸಿಗುವ ಬೀಡಾಡಿ ದನಗಳನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅವುಗಳು ಹೆಚ್ಚಾಗಿ ಕಾಣಸಿಗುವ ಸ್ಥಳಗಳನ್ನು ಗುರುತಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆ ಅಧಿಕಾರಿಗಳ ಜಂಟಿ ಸಹಭಾಗಿತ್ವದಲ್ಲಿ ಎನ್‌ಎಚ್‌ಎಐ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

ಅವುಗಳನ್ನು ಸೆರೆಹಿಡಿದು ‘ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆ’ ಹಾಗೂ ‘ಪ್ರಾಣಿಗಳ ಜನನ ನಿಯಂತ್ರಣ’ ನಿಬಂಧನೆಗೆ ಅನುಗುಣವಾಗಿ ಸೂಕ್ತ ಕೇಂದ್ರ ಅಥವಾ ಪಶು ವೈದ್ಯಕೀಯ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಈ ಕೇಂದ್ರಗಳಲ್ಲಿ ಸೂಕ್ತ ಆಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಶುವೈದ್ಯರ ನೇಮಕ ಮಾಡಬೇಕು. ಹೆದ್ದಾರಿಗಳಲ್ಲಿ ನಿರಂತರ ನಿಗಾ ವಹಿಸಲು ನಿರ್ದಿಷ್ಟ ಹೆದ್ದಾರಿ ಗಸ್ತು ತಂಡ ನಿಯೋಜಿಸಿ, ಸಂಚಾರಕ್ಕೆ ಅಡ್ಡಿಉಂಟುಮಾಡುವ ಅವುಗಳನ್ನು ಸ್ಥಳಾಂತರಿಸಬೇಕು. ನಿರ್ದಿಷ್ಟ ಸಹಾಯವಾಣಿ ಸಂಖ್ಯೆಯನ್ನು ತೆರೆಯಬೇಕು. ಮತ್ತೆ ಅವು ಕಂಡುಬಂದಲ್ಲಿ ಅಥವಾ ಅವುಗಳಿಂದ ಅಪಘಾತ ಉಂಟಾದ ಸಂದರ್ಭದಲ್ಲಿ ಪ್ರಯಾಣಿಕರು ಕೂಡ ದೂರು ನೀಡಲು ಅವಕಾಶ ನೀಡಬೇಕು. ಈ ಸಹಾಯವಾಣಿಯೂ ಹತ್ತಿರದ ನಿಯಂತ್ರಣ ಕೊಠಡಿ, ಪೊಲೀಸ್ ಠಾಣೆ, ಹೆದ್ದಾರಿ
ಪ್ರಾಧಿಕಾರ ಕಚೇರಿ ಹಾಗೂ ಜಿಲ್ಲಾಡಳಿಗೂ ಸಂಪರ್ಕ ಹೊಂದಿರಬೇಕು. ಇದರಿಂದ ಈ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ನೆರವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. 

‌ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿರುವುದು ‍ಪ್ರಾಣಿಗಳ ಜನನ ನಿಯಂತ್ರಣ ನಿಯಮಕ್ಕೆ ವಿರುದ್ಧವಾದ ಆದೇಶ.
ಭಾರತೀಯ ಪ್ರಾಣಿಗಳ ರಕ್ಷಣಾ ಸಂಸ್ಥೆಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.