ನವದೆಹಲಿ: ಲೋಕಸಭೆಯಲ್ಲಿ ಅಂಗವಿಕಲರಿಗೂ ಮೀಸಲಾತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ನ್ಯಾಯಾಂಗವು ನೀತಿ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
‘ಚುನಾವಣೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಿ ಎಂದು ನಾವು ಆದೇಶಿಸಲಾಗುವುದಿಲ್ಲ. ಇದೊಂದು ಶುದ್ಧ ನೀತಿ ನಿರ್ಧಾರದ ವಿಷಯವಾಗಿದೆ. ಇದನ್ನು ತಳ್ಳಿ ಹಾಕುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲ ಹಾಗೂ ಮನೋಶ್ ಮಿಶ್ರಾ ಅವರಿದ್ದ ಪೀಠ ಹೇಳಿತು.
ಅಂಗವಿಕಲತೆಯ ಸ್ಥಿತಿಗತಿಯ ಬಗ್ಗೆ ನಾಮಪತ್ರದಲ್ಲಿ ನಮೂದಿಸಬೇಕು ಎಂದು ಪಿಐಎಲ್ನಲ್ಲಿ ವಿನಂತಿಸಲಾಗಿತ್ತು. ಇದರ ಅಗತ್ಯ ಏನು ಅನ್ನುವುದನ್ನೂ ಕೋರ್ಟ್ ಪ್ರಶ್ನಿಸಿದೆ.
ದೆಹಲಿಯ ದ್ವಾರಕಾ ನಿವಾಸಿ ಜಯಂತ್ ರಾಘವ ಎನ್ನುವವರು ಈ ಪಿಐಎಲ್ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.