ADVERTISEMENT

ಹದಗೆಡುತ್ತಿರುವ ಗಾಳಿ ಗುಣಮಟ್ಟ: ಮಕ್ಕಳ ಹೊರಾಂಗಣ ಚಟುವಟಿಕೆಗೆ ನಿರ್ಬಂಧ

ಪಿಟಿಐ
Published 3 ನವೆಂಬರ್ 2022, 16:04 IST
Last Updated 3 ನವೆಂಬರ್ 2022, 16:04 IST
ದೆಹಲಿಯ ಅಕ್ಷರಧಾಮ ದೇವಾಲಯದ ಸುತ್ತಲೂ ಗುರುವಾರ ದಟ್ಟ ಹೊಗೆ ಆವರಿಸಿತ್ತು–ಪಿಟಿಐ ಚಿತ್ರ 
ದೆಹಲಿಯ ಅಕ್ಷರಧಾಮ ದೇವಾಲಯದ ಸುತ್ತಲೂ ಗುರುವಾರ ದಟ್ಟ ಹೊಗೆ ಆವರಿಸಿತ್ತು–ಪಿಟಿಐ ಚಿತ್ರ    

ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಹದಗೆಡುತ್ತಿರುವುದರಿಂದ ಮಕ್ಕಳ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲುಶಾಲಾ ಆಡಳಿತ ಮಂಡಳಿಗಳು ತೀರ್ಮಾನಿಸಿವೆ.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಗಾಳಿಯ ಗುಣಮಟ್ಟ ಸುಧಾರಿಸುವವರೆಗೂ ಶಾಲೆಗಳಿಗೆ ರಜೆ ನೀಡಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ದೆಹಲಿ ಸರ್ಕಾರಕ್ಕೆ ಮನವಿ ಮಾಡಿತ್ತು. ಪರೀಕ್ಷೆಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಶಾಲೆಗಳಿಗೆ ಬೀಗ ಹಾಕಿದರೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ ಎಂದು ಆಡಳಿತ ಮಂಡಳಿಗಳು ಹೇಳಿವೆ.

‘ದೆಹಲಿ ನಗರ ವ್ಯಾಪ್ತಿಯ ಗಾಳಿಯ ಗುಣಮಟ್ಟ ಗುರುವಾರ ಮತ್ತಷ್ಟು ಬಿಗಡಾಯಿಸಿದೆ’ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ADVERTISEMENT

ಟ್ರಕ್‌ಗಳ ಪ್ರವೇಶಕ್ಕೆ ನಿಷೇಧ: ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿರುವ ಕಮಿಷನ್‌ ಫಾರ್‌ ಏರ್‌ ಕ್ವಾಲಿಟಿ ಮ್ಯಾನೇಜ್‌ಮೆಂಟ್‌ (ಸಿಎಕ್ಯೂಎಂ) ನಗರದೊಳಗೆ ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಡೀಸೆಲ್‌ ಚಾಲಿತ ಲಘು ವಾಹನಗಳ ಸಂಚಾರವನ್ನೂ ನಿಷೇಧಿಸಿದೆ.

‘ಶೈಕ್ಷಣಿಕ ಸಂಸ್ಥೆಗಳು ಹಾಗೂ ತುರ್ತು ಅಲ್ಲದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಲಿವೆ’ ಎಂದು ಸಿಎಕ್ಯೂಎಂ ತಿಳಿಸಿದೆ.

ದೆಹಲಿಯ ಪರಿಸರ ಸಚಿವ ಗೋಪಾಲ್‌ ರಾಯ್‌ ಅವರುಮಾಲಿನ್ಯ ನಿಯಂತ್ರಣಕ್ಕಾಗಿ ಅನುಸರಿಸಬೇಕಿರುವ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.