ADVERTISEMENT

‘ಸುವರ್ಣ ತ್ರಿಭುಜ’ ಕಾರ್ಯಾಚರಣೆ ಎನ್‌ಎಚ್‌ಆರ್‌ಸಿ ನೋಟಿಸ್‌

‘ಸುವರ್ಣ ತ್ರಿಭುಜ’ ಪತ್ತೆ ಕಾರ್ಯಾಚರಣೆ ವಿವರ

​ಪ್ರಜಾವಾಣಿ ವಾರ್ತೆ
Published 13 ಮೇ 2019, 18:49 IST
Last Updated 13 ಮೇ 2019, 18:49 IST
   

ನವದೆಹಲಿ: ಉಡುಪಿಯಿಂದ ತೆರಳಿದ್ದ ‘ಸುವರ್ಣ ತ್ರಿಭುಜ’ ಮೀನುಗಾರಿಕೆ ದೋಣಿಯಿಂದ ಕಾಣೆಯಾಗಿರುವ ಏಳು ಜನ ಮೀನುಗಾರರ ಪತ್ತೆಗೆ ಕೈಗೊಂಡ ಕ್ರಮಗಳ ಕುರಿತು ವಿವರ ನೀಡುವಂತೆ ಸೂಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ಕಣ್ಮರೆಯಾಗಿದ್ದ ದೋಣಿಯ ಅವಶೇಷಗಳು ಮಹಾರಾಷ್ಟ್ರದ ಸಿಂಧುದುರ್ಗದ ಬಳಿ ಸಮುದ್ರದಾಳದಲ್ಲಿ ಪತ್ತೆಯಾಗಿರುವ ಕುರಿತು ನೌಕಾಪಡೆ ಖಚಿತಪಡಿಸಿರುವ ಕುರಿತ ಪತ್ರಿಕಾ ವರದಿಗಳನ್ನು ಆಧರಿಸಿ ಸ್ವಯಂಪ್ರೇರಣೆಯಿಂದ ಈ ನೋಟಿಸ್‌ ಜಾರಿ ಮಾಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಕ್ಷಣಾ ಇಲಾಖೆಯ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿರುವ ಆಯೋಗ, ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ADVERTISEMENT

‘ಕಳೆದ ಡಿಸೆಂಬರ್ ತಿಂಗಳಲ್ಲಿ ದೋಣಿ ಕಣ್ಮರೆಯಾಗಿದ್ದ ಸ್ಥಳದ ಬಳಿಯೇ ಸಮುದ್ರದ ಮೇಲೆ ದೋಣಿಯಲ್ಲಿದ್ದ ಡಬ್ಬಿಯಂತಹ ವಸ್ತುವೊಂದು ಪತ್ತೆಯಾಗಿದ್ದಾಗಿ ನೌಕಾಪಡೆ ಸಿಬ್ಬಂದಿ ಬಹಳ ಮುಂಚೆಯೇ ತಿಳಿಸಿದ್ದರು. ಆದರೂ ದೋಣಿಯ ಪತ್ತೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದಿರುವುದು ಏಕೆ?’ ಎಂದು ರಕ್ಷಣಾ ಸಚಿವಾಲಯವನ್ನು ಪ್ರಶ್ನಿಸಿರುವ ಆಯೋಗ, ಕಾಣೆಯಾದ ಮೀನುಗಾರರ ಪತ್ತೆಗಾಗಿ ಮುಂದುವರಿಸಿರುವ ಕಾರ್ಯಾಚರಣೆ ವಿವರ ನೀಡುವಂತೆಯೂ ನಿರ್ದೇಶನ ನೀಡಿದೆ.

ಮೀನುಗಾರರು ಕಾಣೆಯಾಗಿದ್ದರಿಂದ ತೀವ್ರ ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲಾಗಿದೆಯೇ ಎಂಬ ಕುರಿತು ವಿವರಿಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.