ADVERTISEMENT

ದೀಪಾವಳಿ ಬೋನಸ್ ಆಗಿ ನೌಕರರಿಗೆ ಕಾರು, ಬೈಕ್ ಉಡುಗೊರೆ ಕೊಟ್ಟ ಚಿನ್ನದಂಗಡಿ ಮಾಲೀಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2022, 2:25 IST
Last Updated 17 ಅಕ್ಟೋಬರ್ 2022, 2:25 IST
   

ಚೆನ್ನೈ: ತಮಿಳುನಾಡಿನ ಆಭರಣ ಅಂಗಡಿಯ ಮಾಲೀಕರೊಬ್ಬರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ನೌಕರರಿಗೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚೆನ್ನೈನ ಚಲಾನಿ ಜುವೆಲರ್ಸ್ ಎಂಬ ಚಿನ್ನದಂಗಡಿಯ ಮಾಲೀಕ ಜಯಂತಿ ಲಾಲ್ ಚಯಂತಿ ಎಂಬುವರು ದೀಪಾವಳಿ ಬೋನಸ್‌ ಆಗಿ ತಮ್ಮ ನೌಕರರಿಗೆ ಕಾರು ಮತ್ತು ಬೈಕ್ ಕೊಟ್ಟು ಸರ್‌ಪ್ರೈಸ್ ನೀಡಿದ್ದಾರೆ. ಈ ಉಡುಗೊರೆಗಾಗಿ ಅವರು ₹1.2 ಕೋಟಿ ಖರ್ಚು ಮಾಡಿದ್ದಾರಂತೆ.

ತಮ್ಮ ಮಾಲೀಕರ ಉಡುಗೊರೆಗಳು ಕೆಲ ನೌಕರರಿಗೆ ಸರ್‌ಪ್ರೈಸ್ ಆದರೆ, ಮತ್ತೆ ಕೆಲವರು ತಮ್ಮ ಮಾಲೀಕರ ಸಹೃದಯ ಕಂಡು ಆನಂದಬಾಷ್ಪ ಸುರಿಸಿದ್ದಾರೆ.

ADVERTISEMENT

ನಮ್ಮ ಆಭರಣ ಮಳಿಗೆಯ ನೌಕರರು ನನ್ನ ಕುಟುಂಬವಿದ್ದಂತೆ, ಎಲ್ಲ ಏಳುಬೀಳುಗಳಲ್ಲಿ ಅವರು ನನ್ನ ಜೊತೆಗಿದ್ದರು. ಹೀಗಾಗಿ, 10 ಮಂದಿಗೆ ಕಾರು ಮತ್ತು 20 ಮಂದಿ ನೌಕರರಿಗೆ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಇದರಿಂದ ನನಗೂ ತುಂಬಾ ಸಂತೋಷವಾಗಿದೆ. ಎಲ್ಲ ಮಾಲೀಕರು ತಮ್ಮ ನೌಕರರಿಗೆ ಉಡುಗೊರೆ ನೀಡುವ ಮೂಲಕ ಅವರ ಕೆಲಸವನ್ನು ಗೌರವಿಸಬೇಕು ಎಂದು ಮಾಲೀಕರು ಹೇಳಿರುವುದಾಗಿ ಎಎನ್‌ಐ ಟ್ವೀಟಿಸಿದೆ.

‘ಈ ಉಡುಗೊರೆಗಳು ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಲಿದ್ದು, ಅವರ ಜೀವನಕ್ಕೆ ಅನುಕೂಲ ಮಾಡಿಕೊಡಲಿವೆ. ನಮ್ಮ ಉದ್ಯಮದ ಏಳುಬೀಳುಗಳಲ್ಲಿ ಜೊತೆಗಿದ್ದ ಅವರು, ನಾನು ಲಾಭ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ಎಂದು ಜಯಂತಿ ಲಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.