ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮ್ಮ ಸಚಿವ ಸಂಪುಟ ಪುನಃರಚನೆ ಮಾಡಿದ್ದು, ಅಚ್ಚರಿಯ ಬದಲಾವಣೆಗಳನ್ನು ಮಾಡಿದ್ದಾರೆ.
ಆಡಿಯೊ ಸೋರಿಕೆ ಸಂಬಂಧ ವಿವಾದಕ್ಕೆ ಗುರಿಯಾಗಿದ್ದ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ಟೈಗ ರಾಜನ್ ಅವರ ಖಾತೆಯನ್ನು ಬದಲಿಸಲಾಗಿದೆ. ಅವರಿಗೆ ಮಾಹಿತಿ ತಂತ್ರಜ್ಞಾನ ಖಾತೆಯನ್ನು ನೀಡಲಾಗಿದೆ.
ಮೂರು ಬಾರಿಯ ಸಚಿವ ಟಿ.ಆರ್.ಬಿ ರಾಜಾ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಕೈಗಾರಿಕಾ ಸಚಿವರಾಗಿದ್ದ ತಂಗಂ ತೆನ್ನರಸು ಅವರಿಗೆ ಹಣಕಾಸು ಇಲಾಖೆ ನೀಡಲಾಗಿದೆ. ಜತೆಗೆ ಮಾನವ ಸಂಪನ್ಮೂಲ ನಿರ್ವಹಣೆ ಖಾತೆಯನ್ನೂ ವಹಿಸಲಾಗಿದೆ.
ಹೈನೋದ್ಯಮ ಅಭಿವೃದ್ಧಿ ಸಚಿವರಾಗಿದ್ದ ಎಸ್.ಎಂ ನಾಸೆರ್ ಅವರನ್ನು ಕೈಬಿಟ್ಟು ರಾಜಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಅಚ್ಚರಿ ಎಂಬಂತೆ ಅವರಿಗೆ ಪ್ರಮುಖ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ.
ಐಟಿ ಸಚಿವರಾಗಿದ್ದ ಮನೋ ತಂಗರಾಜ್ ಅವರಿಗೆ ಹೈನೋದ್ಯಮ ಅಭಿವೃದ್ಧಿ ಖಾತೆ ಸಿಕ್ಕಿದೆ. ತೆನ್ನರಸು ನಿರ್ವಹಿಸುತ್ತಿದ್ದ ತಮಿಳು ಅಧಿಕೃತ ಭಾಷೆ ಖಾತೆ ಮಾಹಿತಿ ಸಚಿವ ಎಂ.ಪಿ ಸಾಮಿನಾಥನ್ ಪಾಲಾಗಿದೆ.
ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಕುಟುಂಬಸ್ಥರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಟೈಗ ರಾಜನ್ ಅವರು ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕೆಳ ದಿನಗಳ ಹಿಂದೆ ಬಿಜೆಪಿ ಬಿಡುಗಡೆ ಮಾಡಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.