ಚೆನ್ನೈ: ಲಾಕ್ಡೌನ್ ನಿಯಮ ಉಲ್ಲಂಘಿಸುವವರಿಗೆ ಪಾಠ ಕಲಿಸಲು ತಮಿಳುನಾಡು ಪೊಲೀಸರು ವಿನೂತನ ಪ್ರಯತ್ನವೊಂದನ್ನು ಅನುಸರಿಸಿದ್ದಾರೆ. ಅದೇನು ಗೊತ್ತೇ? ನಕಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಇರುವ ಆಂಬುಲೆನ್ಸ್ ಒಳಗಡೆ ಕಳುಹಿಸುವುದು!
ದ್ವಿಚಕ್ರ ವಾಹನದಲ್ಲಿ ವಿನಾ ಕಾರಣ ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ಯುವಕರಿಗೆ ತಮಿಳುನಾಡಿನ ತಿರುಪ್ಪೂರ್ನ ಪೊಲೀಸರು ಬುದ್ಧಿ ಕಲಿಸಿದ ವಿಡಿಯೊ ಈಗ ವೈರಲ್ ಆಗುತ್ತಿದೆ.
ಮೂವರು ಯುವಕರನ್ನು ತಡೆದ ಪೊಲೀಸರು, ‘ಮಾಸ್ಕ್ ಹಾಕದೆ ಯಾಕೆ ಓಡಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ, ಸಮರ್ಪಕ ಉತ್ತರ ನೀಡದ ಅವರನ್ನು ಆಂಬುಲೆನ್ಸ್ ಒಂದಕ್ಕೆ ಹತ್ತಿಸಲು ಪೊಲೀಸರು ಮುಂದಾಗಿದ್ದಾರೆ. ಯುವಕರು ಪೊಲೀಸರಿಂದ ತಪ್ಪಿಸಿ ಹೇಗಾದರೂ ಪರಾರಿಯಾಗಲು ಯತ್ನಿಸುತ್ತಾರೆ. ಆದರೂ ಬಿಡದ ಪೊಲೀಸರು ಅವರನ್ನು ಆಂಬುಲೆನ್ಸ್ನೊಳಕ್ಕೆ ತಳ್ಳಿ ಬಾಗಿಲು ಹಾಕಿಬಿಡುತ್ತಾರೆ. ಅಷ್ಟರಲ್ಲಿ ಅದರೊಳಗೆ ಮಲಗಿದ್ದ ನಕಲಿ ಕೋವಿಡ್ ಸೋಂಕಿತ ಎದ್ದು ಯುವಕರಿಗೂ ಸೋಂಕು ಹರಡಲು ಮುಂದಾಗುತ್ತಾನೆ. ಯುವಕರು ಹೆದರಿ ಕಿಟಿಕಿಯ ಮೂಲಕ ಹೊರ ಜಿಗಿಯಲು ಯತ್ನಿಸುತ್ತಾರೆ. ಆಗಲೂ ಅವರನ್ನು ಪೊಲೀಸರು ತಡೆಯುವ ದೃಶ್ಯ ವಿಡಿಯೊದಲ್ಲಿದೆ.
ಕೊನೆಗೆ ಪೊಲೀಸರು ಯುವಕರನ್ನು ಬುದ್ಧಿ ಹೇಳಿ ಕಳುಹಿಸಿದ್ದಾರೆ. ತಮಿಳುನಾಡು ಪೊಲೀಸರ ಈ ಪ್ರಯತ್ನಕ್ಕೆ ಈಗ ದೇಶದೆಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.