ADVERTISEMENT

ಜಯಲಲಿತಾ ಹುಟ್ಟುಹಬ್ಬದಂದೇ ವೇದ ನಿಲಯಂ ಎದುರಿನ ಬಂಗಲೆ ಪ್ರವೇಶಿಸಲಿರುವ ಶಶಿಕಲಾ

ಇ.ಟಿ.ಬಿ ಶಿವಪ್ರಿಯನ್‌
Published 24 ಫೆಬ್ರುವರಿ 2024, 1:52 IST
Last Updated 24 ಫೆಬ್ರುವರಿ 2024, 1:52 IST
   

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ 3 ವರ್ಷಗಳ ಬಳಿಕ ವಿ.ಕೆ. ಶಶಿಕಲಾ, ತಮ್ಮ ಆಪ್ತ ಸ್ನೇಹಿತೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಪೋಯಸ್ ಗಾರ್ಡನ್‌ನಲ್ಲಿರುವ ವೇದ ನಿಲಯಂ ನಿವಾಸದ ಎದುರಿನ ಬಂಗಲೆಗೆ ಶಿಫ್ಟ್ ಆಗುತ್ತಿದ್ದಾರೆ.

ಜನವರಿಯಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ನೆರವೇರಿದ್ದು, ಜಯಲಲಿತಾ ಜನ್ಮ ದಿನವಾದ ಫೆಬ್ರುವರಿ 24ರಂದು ಅವರು ಬಂಗಲೆಗೆ ಪ್ರವೇಶಿಸುತ್ತಿದ್ದಾರೆ. ಜಯಲಲಿತಾ ಅವರ ಕಾಲದಲ್ಲಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಪಾರ್ಕಿಂಗ್ ಸ್ಥಳದಲ್ಲಿ ಈ ಬಂಗಲೆ ನಿರ್ಮಿಸಲಾಗಿದೆ.

1980ರಿಂದ 2016ರ ಡಿಸೆಂಬರ್‌ನಲ್ಲಿ ಜಯಲಲಿತಾ ಕೊನೆಯುಸಿರೆಳೆಯುವವರೆಗೆ ಶಶಿಕಲಾ ಅವರ ಜೊತೆಗಿದ್ದರು. 2019ರಲ್ಲಿ ಅಂದಿನ ಅಣ್ಣಾಡಿಎಂಕೆ ಸರ್ಕಾರವು ಜಯಲಲಿತಾ ನಿವಾಸ ವೇದ ನಿಲಯಂ ಅನ್ನು ಸ್ಮಾರಕವಾಗಿ ಪರಿವರ್ತಿಸಲು ನಿರ್ಧರಿಸಿದಾಗ ಶಶಿಕಲಾ ಈ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದರು.

ADVERTISEMENT

ಸರ್ಕಾರದ ಸ್ಮಾರಕ ನಿರ್ಮಾಣ ಪ್ರಸ್ತಾಪವನ್ನು 2020ರಲ್ಲಿ ತಳ್ಳಿಹಾಕಿದ್ದ ಮದ್ರಾಸ್ ಹೈಕೋರ್ಟ್, ಜಯಲಲಿತಾ ಸಹೋದರ ಜಯಕುಮಾರ್ ಅವರ ಮಗಳು ದೀಪಾ, ಮಗ ದೀಪಕ್ ವಶಕ್ಕೆ ಮನೆಯನ್ನು ಒಪ್ಪಿಸಿತ್ತು.

ಶನಿವಾರ, ಶಶಿಕಲಾ ಅವರು ತಮ್ಮ ಸ್ನೇಹಿತೆ ಜಯಲಲಿತಾ ಅವರೊಂದಿಗೆ ಮೂರು ದಶಕಗಳ ಕಾಲ ಕಳೆದ ವೇದ ನಿಲಯಂ ಎದುರಿನ ಹೊಸ ಬಂಗಲೆಗೆ ತೆರಳಲಿದ್ದಾರೆ. ಇದೇವೇಳೆ, ಅವರ ಬೆಂಬಲಿಗರು ಮತ್ತು ಹಿತೈಷಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ.

‘ತನ್ನ ಹೃದಯವು ಯಾವಾಗಲೂ ಪೋಯಸ್ ಗಾರ್ಡನ್‌ನಲ್ಲಿದೆ ಎಂದು ಅವರು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ವೇದ ನಿಲಯಂನ ಎದುರಿಗೆ ಬಂಗಲೆಯನ್ನು ಕಟ್ಟಿಸಿದ್ದಾರೆ’ಎಂದು ಶಶಿಕಲಾ ಅವರ ಆಪ್ತರು’ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.