ಚೆನ್ನೈ: ತಮಿಳುನಾಡು ಹೈನುಗಾರಿಕೆ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂದ್ರ ಬಾಲಾಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಎಐಎಡಿಎಂಕೆ ಪಕ್ಷದ ತಂದೆ ಇದ್ದಂತೆ ಎಂದು ಹೇಳಿಕೊಂಡಿದ್ದಾರೆ.
ವಿರುಧುನಗರ್ ಜಿಲ್ಲೆಯ ಎಐಎಡಿಎಂಕೆ ಕಾರ್ಯದರ್ಶಿಯೂ ಆಗಿರುವ ಬಾಲಾಜಿ ಅವರು, ಶ್ರಿವಿಲ್ಲಿಪುತ್ತುರ್ ಸಮೀಪದ ಮಹಾರಾಜಪುರಂ ಎಂಬಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವೇಳೆ ಈ ರೀತಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಜಯಲಲಿತಾ ಅವರು ರಾಷ್ಟ್ರೀಯ ಪಕ್ಷಗಳೊಂದಿಗಿನ ಮೈತ್ರಿಯನ್ನು ವಿರೋಧಿಸಿದ್ದರು. ಹೀಗಿರುವಾಗ ಎಐಎಡಿಎಂಕೆ–ಬಿಜೆಪಿ ಮೈತ್ರಿ ಹೇಗೆ ಸಾಧ್ಯ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಮ್ಮ(ಜಯಲಲಿತಾ) ನಿರ್ಧಾರವೇ ವಿಭಿನ್ನವಾದುದು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ ಮೋದಿ ನಮ್ಮ ತಂದೆಯಂತಿದ್ದಾರೆ. ಅವರು ಭಾರತದ ತಂದೆ. ನಾವೆಲ್ಲರೂ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
2014ರ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದ ಎಐಎಡಿಎಂಕೆ ಮುಖ್ಯಸ್ಥೆ ದಿವಂಗತ ಜಯಲಲಿತಾ, ಪ್ರಚಾರ ಸಭೆಗಳಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಭಿವೃದ್ಧಿಯ ಯೋಜನೆಗಳನ್ನು ಮುಂದಿಟ್ಟು, ‘ಉತ್ತಮ ಆಡಳಿತಗಾರರು ಯಾರು? ಗುಜರಾತಿನ ಮೋದಿಯೇ? ಅಥವಾ ತಮಿಳುನಾಡಿನ ಲೇಡಿಯೇ?(ಮಹಿಳೆಯೇ)’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು.
ಕಳೆದ ಲೋಕಸಭೆಯಲ್ಲಿ ತಮಿಳುನಾಡಿನ ಒಟ್ಟು 39 ಲೋಕಸಭೆ ಸ್ಥಾನಗಳಲ್ಲಿ37 ಎಐಎಡಿಎಂಕೆ ಪಾಲಾಗಿದ್ದವು.
ಜಯಲಲಿತಾ ನಿಧನಾನಂತರ ಪಕ್ಷವು ಸಮರ್ಥ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.