ADVERTISEMENT

ಗ್ರಾಮ ಪಂಚಾಯ್ತಿ ಚುನಾವಣೆ: ಅಭ್ಯರ್ಥಿಗೆ ಬೆದರಿಕೆ ಹಾಕಿದ ಟಿಡಿಪಿ ಮುಖಂಡನ ಬಂಧನ

ಪಿಟಿಐ
Published 2 ಫೆಬ್ರುವರಿ 2021, 8:55 IST
Last Updated 2 ಫೆಬ್ರುವರಿ 2021, 8:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ಗ್ರಾಮ ಪಂಚಾಯ್ತಿ ಚುನಾವಣೆಯ ವೇಳೆ ಅಭ್ಯರ್ಥಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷ (ಟಿಡಿಪಿ) ಆಂಧ್ರಪ್ರದೇಶ ಘಟಕದ ಮುಖ್ಯಸ್ಥ ಕಿಂಜಾರಪು ಅಚ್ಚನ್‌ ನಾಯ್ಡು ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಶ್ರೀಕಾಕುಳಂ ಜಿಲ್ಲೆಯ ನಿಮ್ಮಡಾ ಗ್ರಾಮದಲ್ಲಿ ನಡೆದ ಈ ಪ್ರಕರಣದಲ್ಲಿ ಅಚ್ಚನ್ ನಾಯ್ಡು ಮತ್ತು ಇತರೆ 21 ಮಂದಿಯನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಈಗಾಗಲೇ ಟಿಡಿಪಿಯಇತರೆ ಹನ್ನೊಂದು ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿಯಲ್ಲಿ ನಡೆದ ಚುನಾವಣೆ ವೇಳೆ ಸರ್‌ಪಂಚ್‌ ಹುದ್ದೆಗೆ(ಅಧ್ಯಕ್ಷ) ನಾಮಪತ್ರ ಸಲ್ಲಿಸುವ ವಿಚಾರದಲ್ಲಿ ಅಚ್ಚನ್‌ ನಾಯ್ಡು ಮತ್ತಿತರರು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಕೆ. ಅಪ್ಪಣ್ಣ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ‌

ADVERTISEMENT

ಈ ಆರೋಪಕ್ಕೆ ಸಂಬಂಧಿಸಿದಂತೆ ಅಚ್ಚನ್‌ ನಾಯ್ಡು ಮತ್ತು ಅಪ್ಪಣ್ಣ ಅವರ ನಡುವೆ ನಡೆದ ದೂರವಾಣಿ ಸಂಭಾಷಣೆಯೊಂದು ಸೋರಿಕೆಯಾಗಿದೆ.

ನಿಮ್ಮಡಾ ಗ್ರಾಮ ಪಂಚಾಯ್ತಿ ಅಚ್ಚನ್ನಾಯ್ಡು ಮತ್ತು ಅವರ ಸಹೋದರ ಕೇಂದ್ರ ಸಚಿವ ದಿವಂಗತ ಕೆ. ಯರನ್ನಾಯ್ಡು ಅವರ ಸ್ವಂತ ಸ್ಥಳವಾಗಿದ್ದು, ಕಳೆದ ಮೂರು ದಶಕಗಳಲ್ಲಿ ಬೇರೆ ಪಕ್ಷದವರು ಯಾರೂ ಸರ್‌ಪಂಚ್ ಹುದ್ದೆಗೆ ಸ್ಪರ್ಧಿಸಿಲ್ಲ.

ಕಿಂಜರಾಪು ಕುಟುಂಬದ ಹಿಡಿತದಲ್ಲಿರುವ, ಟಿಡಿಪಿ ಭದ್ರಕೋಟೆಯಾಗಿರುವ ನಿಮ್ಮಡಾ‌ ಗ್ರಾಮ ಪಂಚಾಯಿತಿ ಚುನಾವಣೆಗೆ ವೈಎಸ್‌ಆರ್‌ಸಿ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿತ್ತು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಎರಡು ದಿನಗಳ ಹಿಂದೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಗ್ರಾಮ ಪಂಚಾಯ್ತಿ ಮೊದಲ ಹಂತದ ಚುನಾವಣೆಗೆ ನಾಮಪತ್ರಿಕೆ ಸಲ್ಲಿಸುವ ಪ್ರಕ್ರಿಯೆ ಜನವರಿ 31ರಿಂದ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಫೆ.7 ಕೊನೆ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.