ADVERTISEMENT

ಬಿಜೆಪಿಯೇತರ ನಾಯಕರಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪತ್ರ

ಜಾತಿ ಗಣತಿಗೆ ಕೈಜೋಡಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 11:53 IST
Last Updated 25 ಸೆಪ್ಟೆಂಬರ್ 2021, 11:53 IST
ತೇಜಸ್ವಿ ಯಾದವ್‌
ತೇಜಸ್ವಿ ಯಾದವ್‌   

ಪಟ್ನಾ (ಪಿಟಿಐ): ಹಿಂದುಳಿದ ವರ್ಗಗಳ ಜಾತಿ ಗಣತಿ ವಿಷಯದಲ್ಲಿ ಸಹಕಾರ ನೀಡುವಂತೆ ಒತ್ತಾಯಿಸಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಬಿಜೆಪಿಯೇತರ ನಾಯಕರಿಗೆ ಶನಿವಾರ ಪತ್ರ ಬರೆದಿದ್ದಾರೆ.

ನಿತೀಶ್‌ ಕುಮಾರ್‌, ಸೋನಿಯಾ ಗಾಂಧಿ, ಶರದ್‌ ಪವಾರ್‌, ಮಮತಾ ಬ್ಯಾನರ್ಜಿ ಮತ್ತು ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ 33 ರಾಜಕೀಯ ನಾಯಕರಿಗೆ ಯಾದವ್‌ ಪತ್ರ ಬರೆದಿದ್ದು ಜಾತಿ ಗಣತಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ.

ಜಾತಿ ಗಣತಿಯು ಆಡಳಿತಾತ್ಮಕವಾಗಿ ತೊಡಕಾಗಿದೆ. ಇದರ ಗಣತಿಯನ್ನು ಕೈಬಿಟ್ಟಿರುವುದು ಒಂದು ಪ್ರಜ್ಞಾ ಪೂರ್ವಕವಾದ ನಿರ್ಧಾರವಾಗಿದೆ ಎಂದು ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗಣತಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ಇದು ಬಿಹಾರ ಸೇರಿದಂತೆ ಇತರೆಡೆ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಸಮಾಧಾನಕ್ಕೆ ಕಾರಣವಾಗಿದೆ.

‘ಜಾತಿ ಗಣತಿಗೆ ಸಂಬಂಧಿಸಿದ ವಿಷಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಮತ್ತು ಈಗಿನ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕಿದೆ’ ಎಂದು ಯಾದವ್‌ ಹೇಳಿದ್ದಾರೆ.

‘ಯಾವುದೇ ವಿಳಂಬವಿಲ್ಲದೆ ಈ ವಿಷಯದಲ್ಲಿ ನಮ್ಮ ಕ್ರಿಯಾ ಯೋಜನೆಯನ್ನು ತಕ್ಷಣ ಸಿದ್ಧಗೊಳಿಸಬೇಕಿದೆ. ಇದಕ್ಕಾಗಿ ನೀವು ಮುಕ್ತವಾಗಿ ಸಲಹೆಗಳನ್ನು ನೀಡಬಹುದು’ ಎಂದು ಯಾದವ್‌ ಅವರು ರಾಜಕೀಯ ನಾಯಕರಿಗೆ ಹೇಳಿದ್ದಾರೆ.

ನಿತೀಶ್‌ ಕುಮಾರ್‌ ನೇತೃತ್ವದ ನಿಯೋಗವೊಂದು ಇತ್ತೀಚಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಜಾತಿ ಗಣತಿಗೆ ಬೇಡಿಕೆ ಇಟ್ಟಿತ್ತು. ತೇಜಸ್ವಿ ಯಾದವ್‌ ನಿಯೋಗದ ಭಾಗವಾಗಿದ್ದರು.

ಬಿಜೆಪಿಯೇತರ ಮುಖ್ಯಮಂತ್ರಿಗಳಾದ ಉದ್ಧವ್‌ ಠಾಕ್ರೆ, ಎಂ.ಕೆ.ಸ್ಟಾಲಿನ್‌, ನವೀನ್‌ ಪಟ್ನಾಯಕ್‌, ಕೆ.ಚಂದ್ರಶೇಖರ್ ರಾವ್, ಜಗಮೋಹನ ರೆಡ್ಡಿ, ಎನ್‌ಡಿಎ ಜೊತೆ ಗುರುತಿಸಿಕೊಳ್ಳದ ನಾಯಕರಾದ ಅಖಿಲೇಶ್‌ ಯಾದವ್‌, ಮಾಯಾವತಿ, ಸಿತಾರಾಂ ಯೆಚೂರಿ, ಫಾರೂಕ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಗೂ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.